Bengaluru | ಅಕ್ರಮವಾಗಿ ರಕ್ತಚಂದನ ಸಾಗಾಟ-ಮಾರಾಟ; ಮೂವರ ಬಂಧನ, 1.75 ಕೋಟಿ ಮೌಲ್ಯದ ಮಾಲು ವಶ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ತಂದು, ಇಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 1.75 ಕೋಟಿ ರೂ. ಮೌಲ್ಯದ 1,897 ಕೆ.ಜಿ. ರಕ್ತಚಂದನ ವಶಕ್ಕೆ ಪಡೆದಿದ್ದಾರೆ.
ವಾಮಮಾರ್ಗದಲ್ಲಿ ಹಣ ಸಂಪಾದಿಸುವ ಸಲುವಾಗಿ ಆರೋಪಿಗಳು, ವ್ಯವಸ್ಥಿತ ಜಾಲದ ಮೂಲಕ ಕಾರು ಮತ್ತು ಬೊಲೆರೊ ವಾಹನದಲ್ಲಿ ರಕ್ತಚಂದನ ತುಂಡುಗಳನ್ನು ಬಚ್ಚಿಟ್ಟುಕೊಂಡು ನಗರದಿಂದ ತಮಿಳುನಾಡಿಗೆ ಮಾರಾಟ ಮಾಡುವಲ್ಲಿ ನಿರತರಾಗಿದ್ದರು. ಖಚಿತ ಮಾಹಿತಿ ಆಧರಿಸಿ, ಹುಳಿಮಾವು ಹಾಗೂ ಆರ್.ಟಿ. ನಗರ ಪೊಲೀಸರು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 1.75 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದರು.
ಪ್ರಕರಣ-1:
ಆಂಧ್ರಪ್ರದೇಶದ ಕಡಪದಿಂದ ತರಿಸಿಕೊಂಡು, ನಗರದಿಂದ ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ಹೋಗಿ ಮಾರಾಟ ಮಾಡುತ್ತಿದ್ದ ಆರೋಪಿ ಅಹಮ್ಮದ್ ಪಾಷಾ ಎಂಬಾತನನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1 ಕೋಟಿ ರೂ. ಮೌಲ್ಯದ 1,143 ಕೆ.ಜಿ. ರಕ್ತಚಂದನ, ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಶಾಮೀಲಾಗಿದ್ದ ಅಪ್ರಾಪ್ತನನ್ನೂ ವಶಕ್ಕೆ ಪಡೆದು ರಿಮ್ಯಾಂಡ್ ಹೋಮ್ಗೆ ಕಳುಹಿಸಲಾಗಿದೆ ಎಂದು ಸೀಮಂತ್ಕುಮಾರ್ ಸಿಂಗ್ ಹೇಳಿದರು.
ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಅಹಮ್ಮದ್ ಪಾಷಾ ಬೆಂಗಳೂರಿನ ಥಣಿಸಂದ್ರದಲ್ಲಿ ವಾಸವಾಗಿದ್ದ. ಆರು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯಿಂದ ರಕ್ತಚಂದನ ಮಾರಾಟದ ಬಗ್ಗೆ ತಿಳಿದುಕೊಂಡಿದ್ದ. ಸುಲಭವಾಗಿ ಹಣ ಸಂಪಾದಿಸಲು ಮುಂದಾದ ಆರೋಪಿ, ಕಡಿಮೆ ಬೆಲೆಗೆ ರಕ್ತಚಂದನ ಖರೀದಿಸಿ ನಗರದ ಮೂಲಕ ತಮಿಳುನಾಡಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಸೀಮಂತ್ಕುಮಾರ್ ಸಿಂಗ್ ವಿವರಿಸಿದರು.
ಪ್ರಕರಣ-2:
ಆಂಧ್ರಪ್ರದೇಶದ ಮದನಪಲ್ಲಿಯಿಂದ ಬೊಲೆರೊ ವಾಹನದಲ್ಲಿ ರಕ್ತಚಂದನ ತುಂಡುಗಳನ್ನು ತುಂಬಿಕೊಂಡು ನಗರಕ್ಕೆ ಬಂದು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಠಾಣಾ ಪೊಲೀಸರು ಬಂಧಿಸಿ, 75 ಲಕ್ಷ ರೂ. ಮೌಲ್ಯದ 754 ಕೆ.ಜಿ. ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಶೇಖರ್ ಹಾಗೂ ವರಪ್ರಸಾದ್ ಬಂಧಿತ ಆರೋಪಿಗಳು. ಆಂಧ್ರಪ್ರದೇಶ ಮೂಲದ ಆರೋಪಿಗಳು ಪದವೀಧರಾಗಿದ್ದರೂ ಕೆಲಸವಿಲ್ಲದೆ ಓಡಾಡುತ್ತಿದ್ದರು. ಜೀವನ ನಿರ್ವಹಣೆಗಾಗಿ ಅಡ್ಡದಾರಿ ತುಳಿದ ಆರೋಪಿಗಳು ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ಕಳ್ಳತನ ಮಾಡಿದ ರಕ್ತಚಂದನವನ್ನು ಬೊಲೆರೊ ವಾಹನದದಲ್ಲಿ ನಗರಕ್ಕೆ ಬಂದು ಮಾರಾಟ ಮಾಡಲು ಮುಂದಾಗಿದ್ದರು. ಆರೋಪಿಗಳ ವಿರುದ್ಧ ಬಿಎನ್ಎಸ್ ಹಾಗೂ ಅರಣ್ಯ ಕಾಯ್ದೆಯಡಿಯ ಸೆಕ್ಷನ್ಗಳನ್ನು ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಸೀಮಂತ್ಕುಮಾರ್ ಸಿಂಗ್ ಮಾಹಿತಿ ನೀಡಿದರು.