×
Ad

ಜಾತಿಗಣತಿ ವರದಿ ವೈಜ್ಞಾನಿಕ ದತ್ತಾಂಶವನ್ನು ಹೊಂದಿದೆ: ಸಚಿವ ಪರಮೇಶ್ವರ್‌

Update: 2025-04-19 12:48 IST

ಜಿ.ಪರಮೇಶ್ವರ್‌

ಬೆಂಗಳೂರು : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳನ್ನು ಕೇಳಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಯಾಳುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದರು.

ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲ ಪ್ರಕರಣಗಳು ಕಡಿಮೆಯಾಗಿವೆ‌.‌ ಸೈಬರ್ ಪ್ರಕರಣಗಳು ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಯಾವ ಆಧಾರದ ಮೇಲೆ ಹೇಳುವುದು. ಈ ಬಗ್ಗೆ ಆರೋಪ ಮಾಡುವವರು ಸ್ವಲ್ಪ ಯೋಚಿಸಿ ಮಾತನಾಡಬೇಕು‌ ಎಂದು ಎಚ್ಚರಿಸಿದರು.

ಜಾತಿಗಣತಿ ವರದಿ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಸಚಿವರಿಗೆ ಹೇಳಿದ್ದಾರೆ. ಮೊನ್ನೆ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆ ಮುಂದುವರಿದಿದ್ದು, ಅವರವರ ಅಭಿಪ್ರಾಯ ತಿಳಿಸಲಿದ್ದಾರೆ. ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಇದು ಒಬ್ಬರ ತೀರ್ಮಾನ ಅಗುವುದಿಲ್ಲ. ಕ್ಯಾಬಿನೆಟ್ ತೀರ್ಮಾನ ಅಗುತ್ತದೆ‌. ಇದು ಮುಖ್ಯಮಂತ್ರಿಯೊಬ್ಬರ ತೀರ್ಮಾನವೂ ಅಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಪಕ್ಷಗಳ ಟೀಕೆಗಳನ್ನು ಗಮನಿಸಿದ್ದೇವೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಯಾವ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅಧ್ಯಯನ‌ ಮಾಡಿ ಸರ್ಕಾರಕ್ಕೆ ತಿಳಿಸುವುದು. ಸ್ವಾಭಾವಿಕವಾಗಿ ಯಾವ ಸಮುದಾಯ ಎಷ್ಟೆಷ್ಟು ಜನಸಂಖ್ಯೆ ಇದೆ ಎಂಬ ಅಂಕಿ-ಅಂಶಗಳ ಮಾಹಿತಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ‌. ಅದರ ಮೇಲೆ ಚರ್ಚೆಯಾಗುತ್ತಿದೆ. ಅಂತಿಮವಾಗಿ ಸರ್ಕಾರ ಒಪ್ಪಬೇಕು. ಮುಂದೆ ಯೋಜನೆಗಳನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಕೆಲ ಸಮುದಾಯದವರು ತಮ್ಮ ಆತಂಕವನ್ನು ವ್ಯಕ್ತ ಮಾಡಿದ್ದಾರೆ. ವರದಿಯನ್ನು ನಾನು ಓದಿದ್ದೇನೆ. ವೈಜ್ಞಾನಿಕ ದತ್ತಾಂಶವನ್ನು ಹೊಂದಿರುವ ವರದಿ‌ಯಾಗಿದೆ. ಒಂದು ಕುಟುಂಬದಲ್ಲಿ ಬೋರ್‌ವೆಲ್ ಹಾಕಿಸಿದ್ದರೆ, ಅದರಲ್ಲಿ ನೀರು ಬಂದಿದೆಯೇ? ನೀರು ಬಂದಿಲ್ಲವೇ? ನೀರು ಸಿಕ್ಕಿಲ್ಲವೇ? ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸಮೀಕ್ಷೆ ವೇಳೆ ಮನೆಗೆ ಹೋದಾಗ ಮನೆಯವರಿಂದ ಸಹಿ ಮಾಡಿಸಿಕೊಂಡಿದ್ದಾರೆ. ಇದರ ಮೇಲುಸ್ತುವಾರಿಗಳು ಸಹಿ ಹಾಕಿರುವ ಡೇಟಾ ನಮ್ಮ ಬಳಿ ಇದೆ‌. ಈ ಎಲ್ಲ ಡೇಟಾ ವರದಿಯಲ್ಲಿದೆ. 1.37 ಲಕ್ಷ ಕುಟುಂಬಗಳ ಮನೆಗೆ ಭೇಟಿ ಕೊಟ್ಟಿದ್ದಾರೆ‌. ಅಷ್ಟು ಡೇಟಾ ಇದೆ. ಇದನ್ನೆಲ್ಲ ಮರದ ಕೆಳಗೆ ಕುಳಿತು ಬರೆದುಕೊಂಡು ಬರಲು ಆಗುವುದಿಲ್ಲ‌ ಎಂದು ತಿರುಗೇಟು ನೀಡಿದರು.

ಒಳ ಮೀಸಲಾತಿ ಹಂಚಿಕೆಗೆ ಈ ಡೇಟಾವನ್ನು ಬಳಸಲು ಪರಿಶೀಲನೆ ಮಾಡುತ್ತಾರೆ. ಈಗಾಗಲೇ ಜಸ್ಟೀಸ್ ನಾಗಮೋಹನ್ ದಾಸ್ ಅವರಿಗೆ ಡೇಟಾ ಸಂಗ್ರಹಿಸಲು ಆದೇಶ‌ ಮಾಡಲಾಗಿದೆ. ಆ ಡೇಟಾವನ್ನು ಇದರೊಂದಿಗೆ ಜಾತಿಗಣತಿ ವರದಿಯನ್ನು ಹೋಲಿಕೆ ಮಾಡುತ್ತಾರೆ. ಜಾತಿಗಣತಿ ವರದಿ ಬಿಡುಗಡೆಯಾಗುವ ಮೊದಲೇ ಡೇಟಾ ಸಂಗ್ರಹಿಸಲು ಆದೇಶ ಮಾಡಿದ್ದೇವೆ. ಈಗ ವಾಪಸ್ ಪಡೆಯಲು ಆಗುವುದಿಲ್ಲ ಎಂದು ತಿಳಿಸಿದರು.

ಸಿಇಟಿ ಪರೀಕ್ಷೆ ವೇಳೆ ಜಾನಿವಾರ ತೆಗೆಸಿರುವುದು ಬಹಳ ದೊಡ್ಡ ತಪ್ಪು. ನಾನು ಕೂಡ ಅದನ್ನು ಒಪ್ಪುವುದಿಲ್ಲ‌.‌ ಪರೀಕ್ಷೆ ವೇಳೆ ಕೈಗೊಳ್ಳಬೇಕಾದ ಕೆಲವು ನಿಯಮಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿರುತ್ತದೆ‌‌. ಇದನ್ನೆಲ್ಲ ಹೇಳಿರುವುದಿಲ್ಲ. ಯಾರೋ ಒಬ್ಬ ಮಾಡಿರುವುದು ಇಡೀ ಸಮಾಜಕ್ಕೆ ಸರಿ ಕಾಣುತ್ತಿಲ್ಲ ಎಂದು ಖಂಡಿಸಿದರು.

ಎತ್ತಿನಹೊಳೆ ಯೋಜನೆಯ ಕೆರೆ ತುಂಬಿಸುವ ಕೆಲಸಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗುತ್ತಿದೆ. 288 ಕೋಟಿ ರೂ. ಖರ್ಚು ಮಾಡಿ 62 ಕೆರೆಗಳನ್ನು ತುಂಬಿಸಲು ಶಂಕುಸ್ಥಾಪನೆ ಮಾಡಲಾಗುತ್ತಿದೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಚಿವ ರಾಜಣ್ಣ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಶಾಸಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News