ಸಮಾನತೆ, ಭ್ರಾತೃತ್ವ ನಮ್ಮ ಜೀವನದ ಭಾಗವಾಗಬೇಕು : ಡಿ.ಕೆ.ಶಿವಕುಮಾರ್

Update: 2026-08-23 19:29 IST

ಬೆಂಗಳೂರು : ಮಾನವೀಯತೆಯಿಂದ ಬದುಕುವುದರ ಜೊತೆಗೆ ಸಮಾನತೆ ಮತ್ತು ಭ್ರಾತೃತ್ವ ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಕರೆ ನೀಡಿದ್ದಾರೆ.

ರವಿವಾರ ಇಲ್ಲಿನ ಎಂ.ಜಿ. ರೈಲ್ವೆ ಕಾಲನಿಯ ಅಮಲೋದ್ಭವ ಮಾತೆಯ ದೇವಾಲಯದ(ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್)125ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ಧರ್ಮಗಳ ಆಚರಣೆಗಳು ಭಕ್ತಿಯ ಮನೋಭಾವದಿಂದ ಜನರ ಶಾಂತಿ-ನೆಮ್ಮದಿಗಾಗಿ ಹಾಗೂ ಸಮಾಜ ಸೇವೆ ಮತ್ತು ಆತ್ಮಶುದ್ಧಿಗಾಗಿ ಆಚರಿಸಲಾಗುತ್ತದೆ ಎಂದರು.

ಹಿಂದೂ ಧರ್ಮದಲ್ಲಿ ದೀಪಬೆಳಗಿದರೆ, ಕ್ರೈಸ್ತ ಧರ್ಮದಲ್ಲಿ ಮೊಂಬತ್ತಿಯನ್ನು ಬೆಳಗುತ್ತಾರೆ. ಕ್ರೈಸ್ತ ಧರ್ಮ, ಹಿಂದೂ ಧರ್ಮ ಸೇರಿದಂತೆ ವಿವಿಧ ಧರ್ಮಗಳು ತನ್ನದೇ ಆದ ಆಚರಣೆಗಳನ್ನು, ಪೂಜಾವಿಧಾನಗಳನ್ನು ಹೊಂದಿವೆ. ಈ ಚರ್ಚ್‍ನಲ್ಲಿರುವಂತೆಯೇ ಹಿಂದೂ ದೇವಾಲಯಗಳಲ್ಲಿ ಧ್ವಜಸ್ತಂಭವಿರುತ್ತದೆ. ಈ ಕಾರ್ಯಕ್ರಮದಲ್ಲಿ ನುಡಿಸಲಾದ ವಾದನದಲ್ಲಿ ಸುಮಧುರ ನಾದ ಹೊಮ್ಮಿದೆ. ಅಂತೆಯೇ ಬಿದಿರಿನ ಕೊಳಲು ವಾದನದಿಂದ ಸುಮಧುರ ನಾದ ಹೊಮ್ಮುತ್ತದೆ. ಅಂತೆಯೇ ಭಗವಾನ್ ಕೃಷ್ಣನ ಶಂಖನಾದಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಅವರು ತಿಳಿಸಿದರು.

ಪ್ರಕೃತಿಯ ನಿಯಮದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ನಾವು ಯಾವ ಧರ್ಮ-ಜಾತಿಯಲ್ಲಿ ಜನಿಸುತ್ತೇವೆ ಎಂದು ಯಾರು ತಿಳಿದಿರುವುದಿಲ್ಲ. ಯಾವುದೇ ಧರ್ಮ ಇತರೆ ಧರ್ಮದವರಿಗೆ ತೊಂದರೆ ಕೊಡುವುದನ್ನು ಬೋಧಿಸುವುದಿಲ್ಲ. ಕ್ರಿಶ್ಚಿಯನ್ ಧರ್ಮವನ್ನು ಟೀಕಿಸುವವರು, ಕ್ರಿಶ್ಚಿಯನ್ ಧರ್ಮದ ಆಸ್ಪತ್ರೆಗಳು, ಶಾಲಾಕಾಲೇಜುಗಳ ಕಡೆಗೆ ಒಲವು ತೋರುತ್ತಾರೆ. ಟೀಕಿಸುವ ಜನರಿಗೆ ಲಾಭ ದೊರೆಯುವಾಗ ಯಾವ ಧರ್ಮವೂ ಅಡ್ಡಿ ಬರುವುದಿಲ್ಲ. ಮಾನವೀಯತೆಯೇ ಪರಮ ಧರ್ಮ ಎಂದು ಭಾವಿಸಿ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುವುದು ಅಗತ್ಯ ಎಂದು ಅವರು ತಿಳಸಿದರು.

ಚರ್ಚ್ ಕಳೆದ 125 ವರ್ಷಗಳಿಂದ ಪರಿಶುದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಡಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಆಸ್ತಿಯಾಗಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕ್ಷೇತ್ರದ ಜನರ ಬೆಂಬಲವಿದೆ. ಅವರು ಈ ಸಂಸ್ಥೆಯ ಅಭಿವೃದ್ಧಿಗೆ ಸರಕಾರದ ವತಿಯಿಂದ ಹೆಚ್ಚಿನ ಸಹಕಾರದ ಬೇಡಿಕೆಯಿರಿಸಿದ್ದು, ಈ ಬಗ್ಗೆ ಸಧ್ಯದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೋ, ಮಾಜಿ ಸಚಿವ ಹಾಗೂ ಶಾಸಕ ದಿನೇಶ್ ಗುಂಡೂರಾವ್, ಫಾದರ್ ಅಮಲ್ ರಾಜ್ ಕ್ರಿಷ್ಟಿನ್, ಜಾಕಬ್ ಯಕ್ಕಾಲಂ, ಆರೋಗ್ಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ನಾನು ಕ್ರೈಸ್ತ ಧರ್ಮದ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದು, ಎಲ್ಲಿಯೂ ನಮ್ಮ ಧರ್ಮವನ್ನು ಬದಲಿಸಿಕೊಳ್ಳಲು ಒತ್ತಾಯ ಹೇರಲಿಲ್ಲ. ಮರಕ್ಕೆ ಬೇರುಗಳು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಮುಖ್ಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ತತ್ವಗಳ ಮೇಲೆ ವಿಶ್ವಾಸವಿದ್ದರೂ, ಪ್ರಕೃತಿಯೊಂದಿಗೆ ಬಾಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಗೆ ಯಾವುದೇ ಜಾತಿಯಿಲ್ಲ.

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News