ಉದ್ಯಾನವನಗಳು ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗಲು ಬಿಡುವುದಿಲ್ಲ : ತೇಜಸ್ವಿ ಸೂರ್ಯ

Update: 2026-08-23 19:35 IST

ಬೆಂಗಳೂರು : ‘ಹಸಿರು ಉದ್ಯಾನವನಗಳು ಮಾರಾಟಕ್ಕಿಲ್ಲ, ಅವು ನಮ್ಮ ಹಕ್ಕು, ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗಲು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯ ಸರಕಾರದ ವಕ್ರದೃಷ್ಟಿ ಉದ್ಯಾನವನಗಳ ಮೇಲೆ ಬಿದ್ದಿದೆ. ಬೆಂಗಳೂರಿನ ಭವಿಷ್ಯದ ಮೇಲೆ ಕಲ್ಲು ಹಾಕಲು ಅವಕಾಶ ನೀಡಬಾರದು’ ಎಂದು ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಜ್ಯ ಸರಕಾರ ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಕಾನೂನು ಬದಲಿಸುವ ನಿರ್ಧಾರ ಕೈಗೊಂಡಿರುವುದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಹಸಿರು ಹತ್ಯೆಗೆ ಮುನ್ನುಡಿ. ಇಂದು ಶೇ.5ರಷ್ಟು ಉದ್ಯಾನವನದ ಜಾಗ ಎನ್ನುತ್ತಾರೆ. ನಾಳೆ ಶೇ.10ರಷ್ಟು? ನಾಡಿದ್ದು ಸಂಪೂರ್ಣ ಉದ್ಯಾನವನವೇ?. ಒಮ್ಮೆ ಕಾಂಕ್ರಿಟ್ ಬಂದ ಮೇಲೆ ಮರಳಿ ಮರ ನೆಡಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದಾರೆ.

‘ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿದ ಬೆಂಗಳೂರನ್ನು ಮುಂದಿನ ಪೀಳಿಗೆಗೆ ಕಾಂಕ್ರೀಟ್ ಕಾಡಾಗಿ ಹಸ್ತಾಂತರಿಸುವ ಯಾವುದೇ ಪ್ರಯತ್ನವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇದು ಕೇವಲ ಉದ್ಯಾನವನದ ಜಾಗದ ಪ್ರಶ್ನೆಯಲ್ಲ. ಇದು ಬೆಂಗಳೂರಿನ ಗಾಳಿ, ನೀರು, ಪರಿಸರ ಮತ್ತು ಭವಿಷ್ಯದ ಪ್ರಶ್ನೆ. ಆದುದರಿಂದ ಎಲ್ಲ ಸಂಸದರು ಮತ್ತು ಶಾಸಕರಿಗೆ ನನ್ನ ಸ್ಪಷ್ಟ ಮನವಿ, ಪಕ್ಷಬೇಧ ಮರೆತು, ಸರಕಾರದ ಅಪಾಯಕಾರಿ ನಿರ್ಧಾರದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

‘ಸರಕಾರ ಬದಲಾಗಬಹುದು. ಆದರೆ ಒಮ್ಮೆ ಉದ್ಯಾನವನ ಹೋದರೆ, ಅದನ್ನು ಮರಳಿ ತರುವ ಅವಕಾಶವೇ ಇರುವುದಿಲ್ಲ. ಬೆಂಗಳೂರನ್ನು ರಿಯಲ್ ಎಸ್ಟೇಟ್ ರಣಹದ್ದುಗಳಿಗೆ ಬಲಿಕೊಡಲು ಬಿಡಬಾರದು. ಈ ಹೋರಾಟ ಯಾರದ್ದೋ ವಿರುದ್ಧವಲ್ಲ, ಬೆಂಗಳೂರಿನ ವಿನಾಶದ ವಿರುದ್ಧ. ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಕೆಂಪೇಗೌಡರಂತಹ ದೂರದೃಷ್ಟಿಯುಳ್ಳವರು ಕಟ್ಟಿದ ಈ ನಗರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಮತ್ತು ನಾಗರಿಕನ ನೈತಿಕ ಕರ್ತವ್ಯ ಎಂದು ಅವರು ಹೇಳಿದ್ದಾರೆ.

‘ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಒಂದೊಂದೇ ಹಸಿರು ಪ್ರದೇಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ಉಳಿಸುವ ನೈತಿಕ ಜವಾಬ್ದಾರಿ ಕೂಡ ನಮ್ಮದೇ ಆಗಿರುವುದರಿಂದ, ಸರಕಾರದ ನಿರ್ಧಾರವನ್ನು ವಿರೋಧಿಸುವಂತೆ ಎಲ್ಲ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ಸಚಿವರನ್ನು ನಾನು ಒತ್ತಾಯಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News