×
Ad

ಡಿಜಿಟಲ್ ಅರೆಸ್ಟ್ ಪ್ರಕರಣ : 31.83 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಟೆಕ್ಕಿ!

Update: 2025-11-17 19:04 IST

ಸಾಂದರ್ಭಿಕ ಚಿತ್ರ | PC : Image by freepik

ಬೆಂಗಳೂರು : ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು 31.83 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಇಂದಿರಾನಗರದ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ರಾಜ್ಯದಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠದ ಮೊತ್ತದ ಹಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರಿಗೆ 2024ರ ಸೆಪ್ಟೆಂಬರ್ 15ರಂದು ಡಿಎಚ್‍ಎಲ್ ಕೊರಿಯರ್ ಕಂಪೆನಿಯ ಪ್ರತಿನಿಧಿ ಸೋಗಿನಲ್ಲಿ ಆರೋಪಿ ಕರೆ ಮಾಡಿದ್ದಾನೆ. ‘ನಿಮ್ಮ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‍ಗಳು, ನಾಲ್ಕು ಪಾಸ್‍ ಪೋರ್ಟ್‍ಗಳು ಮತ್ತು ನಿಷೇಧಿತ ಎಂಡಿಎಂ ಮಾದಕ ದ್ರವ್ಯಗಳನ್ನೊಳಗೊಂಡಿದ್ದ ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಕೊರಿಯರ್ ಕೇಂದ್ರಕ್ಕೆ ಬಂದಿದೆ’ ಎಂದು ಹೇಳಿದ್ದಾನೆ.

ಆದರೆ ‘ತಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪ್ಯಾಕೇಜ್‍ಗೂ ತಮಗೂ ಸಂಬಂಧವಿಲ್ಲ’ ಎಂದು ದೂರುದಾರ ಮಹಿಳೆ ಹೇಳಿದ್ದಾರೆ. ಆದರೆ, ‘ಫೋನ್ ಸಂಖ್ಯೆ ಪ್ಯಾಕೇಜ್‍ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು’ ಎಂದಿದ್ದ ಆರೋಪಿ, ಸೈಬರ್ ಅಪರಾಧ ಸೆಲ್‍ಗೆ ದೂರು ನೀಡುವಂತೆ ಮಹಿಳೆಗೆ ಹೇಳಿದ್ದಾನೆ ಮತ್ತು ದೂರುದಾರ ಮಹಿಳೆ ಪ್ರತಿಕ್ರಿಯಿಸುವುದಕ್ಕೂ ಮುನ್ನವೇ ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.

ನಂತರ ಮಹಿಳೆಯ ವಿವರಗಳನ್ನು ಪಡೆದುಕೊಂಡ ಆರೋಪಿಗಳು, ಆಕೆಯ ಮೇಲೆ ನಿಗಾ ಇರಿಸಿರುವುದಾಗಿ ಬೆದರಿಸಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಯಾರಿಗಾದರೂ ಈ ಕುರಿತು ಮಾಹಿತಿ ನೀಡಿದರೆ ನಿಮ್ಮ ಕುಟುಂಬವನ್ನೂ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆದರಿಸಿದ್ದಾರೆ ಎನ್ನಲಾಗಿದೆ.

ತಮ್ಮ ಮಗನ ಮದುವೆ ಸಮೀಪಿಸುತ್ತಿದ್ದರಿಂದ ಆತಂಕಗೊಂಡಿದ್ದ ಮಹಿಳೆ, ಆರೋಪಿಗಳು ಹೇಳಿದಂತೆ ನಡೆದುಕೊಂಡಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡು ವಿಡಿಯೋ ಕರೆ ಮಾಡಿದ್ದ ವ್ಯಕ್ತಿಯೋರ್ವ ಮಹಿಳೆಗೆ ಹೆದರಿಸಿದ್ದ. ನಂತರ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಮಹಿಳೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ್ದಾನೆ.

ಈ ಸಮಯದಲ್ಲಿ ತಾವು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವುದಾಗಿ ದೂರುದಾರೆ ವಿವರಿಸಿದ್ದಾರೆ. 2024ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕ (ಎಫ್‍ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದಾನೆ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ಆರೋಪಿಗಳು ಹಂತಹಂತವಾಗಿ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಸೂಚನೆಯಂತೆ ಸಂತ್ರಸ್ತೆ ತನ್ನ ಎಫ್‍ಡಿ ಹಣವನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು ಸುಮಾರು 187 ವಹಿವಾಟುಗಳಲ್ಲಿ ಆರೋಪಿಗಳಿಗೆ ವರ್ಗಾಯಿಸಿದ್ದರು. ವರ್ಗಾಯಿಸಿದ ಹಣವನ್ನು 2025ರ ಫೆಬ್ರವರಿಯೊಳಗೆ ಪರಿಶೀಲನೆ ಮಾಡಿ ಹಿಂತಿರುಗಿಸಲಾಗುವುದು ಎಂದು ಆರೋಪಿಗಳು ಮಹಿಳೆಗೆ ನಂಬಿಸಿದ್ದರು. ಅಲ್ಲದೇ ಮಹಿಳೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಹಣವನ್ನು ಮರಳಿಸದೇ ಆರೋಪಿಗಳು ಕಾರಣ ನೀಡಲಾರಂಭಿಸಿದಾಗ ಅನುಮಾನಗೊಂಡ ಮಹಿಳೆಯು ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ 2025ರ ನವೆಂಬರ್ 14ರಂದು ದೂರು ನೀಡಿದ್ದರು. ಅದರಂತೆ ಎಫ್‍ಐಆರ್ ದಾಖಲಿಸಿರುವ ಪೊಲೀಸರು, ಇದೀಗ ತನಿಖೆ ಆರಂಭಿಸಿದ್ದಾರೆ. ಮಗನ ಮದುವೆ ಮತ್ತು ಇತರ ಕಾರಣಗಳಿಂದ ಹೆದರಿ ದೂರು ದಾಖಲಿಸುವುದು ವಿಳಂಬವಾಗಿದೆ ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News