ರಾಜ್ಯದಲ್ಲಿ ಕಾಂಗ್ರೆಸ್ ಬಂದರೂ ಶಿಕ್ಷಣ ಕ್ಷೇತ್ರದಲ್ಲಿ ನಿಲ್ಲದ ಆರೆಸ್ಸೆಸ್, ಬಲಪಂಥೀಯರ ಪ್ರಭಾವ : ಡಾ.ಸಿ.ಜಿ.ಲಕ್ಷ್ಮೀಪತಿ
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ತನೇ ಹುತಾತ್ಮ ದಿನಾಚರಣೆ, AISA ವತಿಯಿಂದ ಸಂವಾದ
ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಶಿಕ್ಷಣ ಕ್ಷೇತ್ರದಲ್ಲಿ ಆರೆಸ್ಸೆಸ್, ಬಲಪಂಥೀಯರ ಪ್ರಭಾವ, ಚಟವಟಿಕೆಗಳು ತಗ್ಗಿಲ್ಲ. ಇದರ ಜತೆ ಪ್ರತಿ ತಿಂಗಳು ಸರಿ ಸುಮಾರು 2500 ಸರಕಾರಿ ಪ್ರಾಧ್ಯಾಪಕರು ನೇರವಾಗಿ ಬಲಪಂಥೀಯ ವಿಚಾರಧಾರೆಯುಳ್ಳ ತರಬೇತಿ ಪಡೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ ಎಂದು ಬರಹಗಾರ, ಸಮಾಜಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮೀಪತಿ ಹೇಳಿದ್ದಾರೆ.
ಶನಿವಾರ ಸಂಜೆ ನಗರದ ಆರ್ಶೀವಾದ್ ಕಟ್ಟಡದ ಲೋಯೋಲಾ ಸಭಾಂಗಣದಲ್ಲಿ ಹಿರಿಯ ಪತ್ರಕರ್ತೆ, ವಿಚಾರವಾದಿ ದಿವಂಗತ ಗೌರಿ ಲಂಕೇಶ್ ಅವರ ಹತ್ತನೇ ಹುತಾತ್ಮ ದಿನಾಚರಣೆ ನೆನಪಿನಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್(ಎಐಎಸ್ಎ) ಕರ್ನಾಟಕ ಘಟಕ ಆಯೋಜಿಸಿದ್ದ ‘ಕ್ಯಾಂಪಸ್ ಗಳಿಂದ ಬೀದಿಗಳ ವರೆಗೆ ಪ್ರಜಾಪ್ರಭುತ್ವಕ್ಕೆ ಕುತ್ತು?' ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಪ್ರತಿ ತಿಂಗಳಿಗೆ ಎರಡು ಬಾರಿ ಸರಕಾರಿ ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಇತಿಹಾಸ, ವಿಜ್ಞಾನ, ಸಮಾಜಶಾಸ್ತ್ರ ಸೇರಿದಂತೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ಬೋಧಿಸಬೇಕೆಂದು ಬಲಪಂಥೀಯ ಮಾರ್ಗದಲ್ಲಿಯೇ ಪ್ರಾಧ್ಯಪಕರಿಗೆ ನಿರ್ದೇಶನ ನೀಡಲಾಗುತ್ತಿದೆ. ಇನ್ನೊಂದೆಡೆ, ಆರೆಸ್ಸೆಸ್ ಅಂಗ ಸಂಸ್ಥೆ ಎಂದೇ ಹೇಳಲಾಗುವ ದೇವನಹಳ್ಳಿ ಬಳಿಯಿರುವ ಚಾಣಕ್ಯ ವಿಶ್ವವಿದ್ಯಾಲಯವೂ ಸಂಪೂರ್ಣ ಬಲಪಂಥೀಯವಾಗಿ ಮಾರ್ಪಟ್ಟಿದ್ದು, ಇಲ್ಲಿ ಅನೇಕ ಕೋರ್ಸ್ಗಳಿಗೆ ಸರಕಾರದ ಅನುಮತಿಯೇ ಇಲ್ಲದೆ ನಡೆಸಲಾಗುತ್ತಿದೆ. ಹೀಗೆ, ಹಂತ ಹಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆರೆಸ್ಸೆಸ್, ಬಲಪಂಥೀಯರ ಪ್ರಭಾವ, ಚಟವಟಿಕೆಗಳು ಮುಂದುವರೆದರೂ ಇಲ್ಲಿನ ಕಾಂಗ್ರೆಸ್ ಸರಕಾರ ಯಾವುದೇ ಕ್ರಮಗಳನ್ನು ಇದುವರೆಗೂ ಕೈಗೊಂಡಿಲ್ಲ ಎಂದು ಹೇಳಿದರು.
ಇನ್ನೊಂದೆಡೆ, ರಾಜ್ಯದಲ್ಲಿರುವ ಮೇಲ್ಜಾತಿಯ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಬಲಪಂಥೀಯರಿಗೆ ರಾಜಕೀಯ ಲಾಭ ಮಾಡಿಕೊಡುವ ಕೇಂದ್ರಗಳಾಗಿವೆ. ಅದರಲ್ಲೂ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ವಿದ್ಯಾ ಸಂಸ್ಥೆಗಳು ಬಲಪಂಥೀಯ ವಿಚಾರಗಳನ್ನು ಪೋಷಣೆ ಮಾಡುತ್ತಿವೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರೆ ಬೋಧನೆ ಮಾಡಬೇಕಾದ ಶಿಕ್ಷಕರೇ ಸಣ್ಣ ಸ್ವಾಮೀಜಿ, ಮಠಾಧೀಶರಂತೆ ವರ್ತನೆ ಮಾಡುತ್ತಾರೆ. ಇತ್ತ ಮುಸ್ಲಿಮರ ಶಿಕ್ಷಣ ಸಂಸ್ಥೆಗಳು ಕಡಿಮೆ ಇಲ್ಲ, ಅಲ್ಲಿನ ವಾತಾವರಣವೂ ವಿದ್ಯಾರ್ಥಿಗಳ ಮಾನಸಿಕತೆ ಅಭಿವೃದ್ಧಿಪಡಿಸುವುದಿಲ್ಲ. ಒಟ್ಟಾರೆ, ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲಪಂಥೀಯರಿಂದ ಮುಕ್ತವಾಗಬೇಕು. ಪ್ರಜಾಪ್ರಭುತ್ವ, ಸಂವಿಧಾನ ಕುರಿತು ಚರ್ಚೆಗಳನ್ನು ಹುಟ್ಟುಹಾಕಬೇಕು ಎಂದು ಅವರು ತಿಳಿಸಿದರು.
ಜಾತಿಯತೆ ಎನ್ನುವುದು ತುಂಬಾ ಅಳವಾದ ಬೇರು. ಇಂತಹ ಮಾನಸಿಕತೆ ಹುಟ್ಟಿನಿಂದಲೇ ಬರುತ್ತಿದ್ದು, ಇದಕ್ಕೆ ನೇರವಾಗಿ ನಮ್ಮ ಕುಟುಂಬಗಳೇ ಕಾರಣವಾಗಿವೆ. ಒಂದು ಕುಟುಂಬ ಪರಿಪೂರ್ಣವಾಗಿ ಸಾಮಾಜಿಕವಾಗಿ ಬದಲಾವಣೆಯಾದರೆ ಮಾತ್ರ ದೇಶ ಬದಲಾಗುತ್ತದೆ. ಹೀಗಾಗಿ, ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ನಮ್ಮ ಅಡಿಪಾಯವನ್ನು ಮೊದಲು ಬದಲಾವಣೆ ಮಾಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವುದು ಮುಖ್ಯ ಹಾಗೂ ವಿದ್ಯಾರ್ಥಿ ಚಳವಳಿಗಳನ್ನು ಜೀವಂತವಾಗಿಡುವುದು ಅಷ್ಟೇ ಮುಖ್ಯ ಎಂದು ಲಕ್ಷ್ಮೀಪತಿ ಪ್ರತಿಪಾದಿಸಿದರು.