ಸೋನಿಯಾ, ರಾಹುಲ್ ಗಾಂಧಿಯನ್ನು ಗಡೀಪಾರು ಮಾಡುವುದೇ ಒಳ್ಳೆಯದು: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಒಂದೇ ಮಾತರಂ ಗೀತೆಗೆ ಅವಮಾನ ಮಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಅವರ ಮಗ ರಾಹುಲ್ ಗಾಂಧಿಯವರನ್ನು ಗಡೀಪಾರು ಮಾಡುವುದೇ ಒಳ್ಳೆಯದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೇ ಮಾತರಂ ಗೀತೆ ಹಾಡುವಾಗ ಕಾಂಗ್ರೆಸ್ ಅಪಮಾನ ಮಾಡಿದೆ. ಸೋನಿಯಾ ಗಾಂಧಿ ಈ ದೇಶದ ಪ್ರಜೆ ಅಲ್ಲ. ಅವರಿಗೆ ನಮ್ಮ ದೇಶದ ಬಗ್ಗೆ ಗೌರವ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ವಂದೇ ಮಾತರಂ ಹಾಡುವಾಗ ಗೌರವ ತೋರಿಸಿ ನಿಲ್ಲಿಸಿ ನಿಲ್ಲಿಸಿ ಎಂದು ಕಾನೂನು ತಿರಸ್ಕಾರ ಮಾಡಿದ್ದಾರೆ. ಇವರಿಗೆಲ್ಲ ಈ ದೇಶಲ್ಲಿ ಇರುವ ಯೋಗ್ಯತೆ ಇಲ್ಲ, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮೂವರನ್ನು ಕಗ್ಗೊಲೆ ಮಾಡಿದ ಸರಕಾರ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯ ಮಂಗಲ ಅರಣ್ಯ ಪ್ರದೇಶದಲ್ಲಿ ಮೂವರನ್ನು ಈ ಸರಕಾರ ಕಗ್ಗೊಲೆ ಮಾಡಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರ ಪರ ಇದ್ದೇವೆ ಎಂದು ಹೇಳುವ ಸರಕಾರವೇ ಅದೇ ಸಮುದಾಯಕ್ಕೆ ಸೇರಿದ ಮೂವರನ್ನು ಎನ್ ಕೌಂಟರ್ ಮಾಡಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎನ್ಕೌಂ ಟರ್ ನಲ್ಲಿ ಮೃತಪಟ್ಟವರು ಸಭ್ಯರು ಎಂದು ಆ ಪ್ರದೇಶದ ಎಲ್ಲರೂ ಹೇಳುತ್ತಿದ್ದಾರೆ. ಮೃತಪಟ್ವವರಿಗೂ ಅರಣ್ಯಾಧಿಕಾರಿಗಳಿಗೂ ಬಹುದಿನಗಳಿಂದ ವಾಗ್ವಾದ ನಡೆಯುತ್ತಿತ್ತು. ಆದ್ದರಿಂದಲೇ ಅವರನ್ನು ಎನ್ ಕೌಂಟರ್ ಮಾಡಿ ಸಾಯಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಸರಕಾರಕ್ಕೆ ಜನರ ಪ್ರಾಣದ ಬೆಲೆಯೇ ಗೊತ್ತಿಲ್ಲ. ಈ ಬಗ್ಗೆ ಸರಕಾರ ಎರಡೂ ಸದನದಲ್ಲಿ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ನಾಗೇಂದ್ರ ರಾಜೀನಾಮೆ ವರೆಗೆ ಹೋರಾಟ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ನುಂಗಿದ್ದ ನಾಗೇಂದ್ರ ಅವರನ್ನೇ ಮತ್ತೆ ಈ ಸರ್ಕಾರದಲ್ಲಿ ಸಚಿವರಾಗಿ ನೇಮಿಸಲಾಗಿದೆ. ನಾಗೇಂದ್ರ ಅವರಿಗೆ ಇನ್ನೂ ಕ್ಲೀನ್ ಚಿಟ್ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಣ ನುಂಗಿದ್ದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ. ಹಣ ತಿಂದ ಪಾಪಕ್ಕೆ ನಾಗೇಂದ್ರ ಅವರ ಭವಿಷ್ಯ ಕಟ್ಟಿಕೊಡಲು ಸಚಿವರಾಗಿನ್ನಾಗಿಸಿದ್ದಾರೆ ಎಂದರು. ನಾಗೇಂದ್ರ ಅವರು ರಾಜೀನಾಮೆ ಕೊಡೋವರೆಗೂ ಸದನ ನಡೆಯಲು ಬಿಡುವುದಿಲ್ಲ. ಹೋರಾಟ ಮಾಡೇ ತೀರುತ್ತೇವೆ ಎಂದರು.
ಕಾಶಪ್ಪನವರ್ ಸಂಪುಟದಿಂದ ಕೈ ಬಿಡಿ...
ಮೋದಿ ದೇಶವನ್ನು ಹೊಲಗೇರಿ ಮಾಡಿದ್ದಾರೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಅವರು ಹೇಳಿ ಇಡೀ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. \
ಕಾಂಗ್ರೆಸ್ ಹೇಗೆ ದಲಿತರ ವಿರುದ್ಧ ಇದೆ ಎಂಬುದು ಜಗಜ್ಜಾಹೀರಾಗಿದೆ. ಈ ವಿಷಯವನ್ನೂ ಸದನದಲ್ಲಿ ಪ್ರಸ್ತಾಪಿಸಲಾಗುವುದು. ಉತ್ತರ ಸಿಗುವವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.