×
Ad

ʼಕನಿಷ್ಠ ಬೆಂಬಲ ಬೆಲೆʼ ರೈತರಿಂದ ಖರೀದಿಸುವ ಆಹಾರ ಧಾನ್ಯಗಳ ಗುಣಮಟ್ಟ ಕಾಪಾಡಬೇಕು: ಕೆ.ಎಚ್.ಮುನಿಯಪ್ಪ

Update: 2025-03-03 19:09 IST

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆ(ಎಂ.ಎಸ್.ಪಿ)ಯಡಿ ರೈತರಿಂದ ಖರೀದಿಸುವ ರಾಗಿ, ಜೋಳ, ಭತ್ತದ ಗುಣಮಟ್ಟವನ್ನು ಕಾಪಾಡಬೇಕು. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೆ ಎಂ.ಎಸ್.ಪಿಯ ಅಧ್ಯಕ್ಷರಿದ್ದು ಆಹಾರ ಧಾನ್ಯಗಳು ಗುಣಮಟ್ಟದಲ್ಲಿ ವ್ಯತ್ಯಾಸವಿದ್ದಲ್ಲಿ ಸ್ಥಳದಲ್ಲಿಯೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ ನೀಡಿದರು.

ಸೋಮವಾರ ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕರು, ಜಿಲ್ಲೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಖರೀದಿ ಎಜೆನ್ಸಿ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಸಭೆ ನಡೆಸಿದರು.

ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ.ಗಳನ್ನು ಹಾಗೂ ಪ್ರತಿ ಕ್ವಿಂಟಾಲ್ ಹೈಬ್ರೀಡ್ ಜೋಳಗೆ 3371 ರೂ. ಹಾಗೂ ಮಾಲದಂಡಿ ಜೋಳ 3421 ರೂ., ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್ 2300 ರೂ. ಹಾಗೂ ‘ಗ್ರೇಡ್ ಎ’ ಭತ್ತಕ್ಕೆ 2320 ರೂ. ಧರ ನಿಗದಿಯಾಗಿದ್ದು, ಈ ದರದಲ್ಲಿ ರೈತರಿಂದ ಖರೀದಿಸಿ ಅವರಿಗೆ ಸರಿಯಾದ ಸಮಯಕ್ಕೆ ಹಣ ಸಂದಾಯ ಮಾಡಬೇಕು ಎಂದು ಮುನಿಯಪ್ಪ ಹೇಳಿದರು.

ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಗಳ ಸ್ಥಳಗಳಲ್ಲಿ ರೈತರಿಗೆ ಕುಡಿಯುವ ನೀರು ಹಾಗೂ ಶಾಮಿಯಾಣದ ವ್ಯವಸ್ಥೆಯನ್ನು ಕಲ್ಪಿಸಬೇಕು. ಏಕೆಂದರೆ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಬಿಸಿಲಿರುವುದರಿಂದ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು ಎಂದು ಮುನಿಯಪ್ಪ ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ನೀಡುವುದರೊಂದಿಗೆ ಫೆಬ್ರವರಿ ತಿಂಗಳ 5 ಕೆಜಿ ಅಕ್ಕಿಯನ್ನು ಸೇರಿಸಿ 15 ಕೆಜಿ ಅಕ್ಕಿ ವಿತರಿಸಲು ತೀರ್ಮಾನಿಸಿದ್ದು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳೇ ನೇರವಾಗಿ ಸ್ಥಳಕ್ಕೆ ಬೇಟಿ ಮಾಡಿ ಪರಿಶೀಲನೆ ಮಾಡಬೇಕು. ರಾಗಿಯನ್ನು ಖರೀದಿಸುವ ಕೇಂದ್ರಗಳಲ್ಲಿ ತೂಕದಲ್ಲಿ ವ್ಯತ್ಯಾಸಗಳು ಕಾಣದಂತೆ ನಿಗಾವಹಿಸಬೇಕು ಲೋಪವೆಸಗಿದ್ದಲ್ಲಿ ಅಧಿಕಾರಿಗಳನ್ನು ಸ್ಥಳದಲ್ಲಿಯೆ ಅಮಾನತ್ತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರಕಾರದ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತೆ ವಾಸಿ ರೆಡ್ಡಿ ವಿಜಯಜೋತ್ನಾ, ನಿಗಮ ನಿರ್ದೇಶಕ ಚಂದ್ರಕಾತ್, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕ ಎಂ.ಎಸ್.ಎನ್.ಬಾಬು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News