×
Ad

ಪ್ರತಿಯೊಬ್ಬ ಭೂಮಾಪಕರಿಗೂ ರೋವರ್ ನೀಡಲು ಕ್ರಮ : ಕೃಷ್ಣ ಬೈರೇಗೌಡ

Update: 2025-02-19 20:20 IST

ಬೆಂಗಳೂರು : ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ತ್ವರಿತ ಸರ್ವೇ ಮಾಡಿಕೊಡುವುದು ಮತ್ತು ಅಧಿಕಾರಿಗಳ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂಮಾಪಕರಿಗೂ ಒಂದು ರೋವರ್ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.

ಬುಧವಾರ ಇಲ್ಲಿನ ಕೆ.ಆರ್.ವೃತ್ತದಲ್ಲಿರುವ ಸರ್ವೇ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಆಧುನಿಕ 465 ‘ರೋವರ್’ ಉಪಕರಣಗಳನ್ನು ಭೂಮಾಪಕರಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಕೆಲವರು ಇಂದಿಗೂ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಎಲ್ಲ ಭೂಮಾಪಕರಿಗೂ ರೋವರ್ ನೀಡಲಾಗುವುದು ಎಂದು ಅವರು ತಿಳಿಸಿದರು.

ಸರ್ವೇ ಕೆಲಸವನ್ನು ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಿ, ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 1830 ರಿಂದ 1870ರ ವರೆಗೆ ಮಾತ್ರ ಸರ್ವೇ ಕೆಲಸ ಆಗಿದೆ. 1967 ರಲ್ಲಿ ಅಲ್ಪ ಸಲ್ಪ ಸರ್ವೇ ಆಗಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸರ್ವೇ ಆಗಿಲ್ಲ. ಆದರೆ, ಪ್ರಸ್ತುತ ರೈತರ ನಾನಾ ಸಮಸ್ಯೆಗಳಿಗೆ ಸರ್ವೇ ಹಾಗೂ ರೀ ಸರ್ವೇ ಕೆಲಸಗಳಿಗೆ ವೇಗ ತುಂಬುವ ಅಗತ್ಯವಿದೆ. ಆದರೆ, 1806ರಿಂದಲೂ ಸರ್ವೇ ಕೆಲಸಗಳಿಗೆ ಬಳಸಿದ ಚೈನ್ ವ್ಯವಸ್ಥೆಯನ್ನು ಈಗಲೂ ಮುಂದುವರೆಯುತ್ತಿರುವುದು ಆಘಾತಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆಯೇ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಆದರೆ, ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡುವುದಕ್ಕೆ ಜನ ಇದ್ದಾರೆ ಎಂದು ಉಡಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News