×
Ad

SIR | ಬಿಜೆಪಿಯಿಂದ ಆಧಾರರಹಿತ ಆರೋಪ : ಎಂ.ಲಕ್ಷ್ಮಣ್

Update: 2026-07-05 23:54 IST

ಮೈಸೂರು : ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುವ ಮೂಲಕ ನಗೆಪಾಟಲಿಗೀಡಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರಕಾರ ದೇಶದ 13 ರಾಜ್ಯಗಳಲ್ಲಿ ಎಸ್‌ಐಆರ್ ಮಾಡಿ 6.5 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ 1 ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಿದೆ. ಆದರೆ, ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡದೆ ಪ್ರತಿ ಮತದಾರನ ಬಳಿಗೆ ಹೋಗಿ, ಅರ್ಜಿ ಭರ್ತಿ ಮಾಡಿಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಅರ್ಹ ಮತದಾರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತಿದೆ. ಇದನ್ನು ಸಹಿಸದ ಬಿಜೆಪಿ ಕಳೆದ ಎರಡು ದಿನಗಳಿಂದ ಆಧಾರ ರಹಿತ ಹಾಗೂ ಅನಗತ್ಯ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟದಲ್ಲಿ 5 ಕೋಟಿ 60 ಲಕ್ಷ ಮತದಾರರಿದ್ದು, ಎಸ್‌ಐಆರ್ ಮ್ಯಾಪಿಂಗ್ ವೇಳೆ 50 ಲಕ್ಷ ಮತದಾರರನ್ನು ಈಗಾಗಲೇ ಹೊರಗಿಟ್ಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 60 ಲಕ್ಷ ಮತದಾರರನ್ನು ಕೈಬಿಡುವ ಹುನ್ನಾರವನ್ನು ಕೇಂದ್ರ ಬಿಜೆಪಿ ಸರಕಾರ ನಡೆಸಿದೆ. ಒಟ್ಟಾರೆ ರಾಜ್ಯದಲ್ಲಿ 1ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಯಿಂದ ದೂರ ಇಡುವ ಗುರಿ ಹೊಂದಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆಗೆ ನೀಡುತ್ತಿರುವ ಎನ್ಯುಮರೇಷನ್ ಅರ್ಜಿಯೂ ಹಲವು ಲೋಪಗಳಿಂದ ಕೂಡಿದೆ. ಪದವಿ ಶಿಕ್ಷಣ ಪಡೆದವರೂ ಈ ಅರ್ಜಿಯನ್ನು ಸುಲಭವಾಗಿ ಭರ್ತಿ ಮಾಡಲಾಗುತ್ತಿಲ್ಲ. ಭರ್ತಿ ಮಾಡುವಾಗ ಸ್ವಲ್ಪ ತಪ್ಪಾದರೂ ಅವರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಮತ್ತೆ ಅವರು ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ಎಲ್ಲಾ ದಾಖಲೆ ನೀಡಬೇಕಿದೆ ಎಂದು ವಿವರಿಸಿದರು.

ಗುಂಪು ಗುಂಪಾಗಿ ಸಹಾಯ ಮಾಡಿದರೆ ತಪ್ಪೇನು: ಈ ಭಾಗದ ಸಂಸದರು ಎನ್.ಆರ್. ಕ್ಷೇತ್ರದಲ್ಲಿ ಎನ್ಯುಮರೇಷನ್ ಅರ್ಜಿಗಳನ್ನು ಗುಂಪು ಗುಂಪಾಗಿ ವಿತರಿಸಿ, ಭರ್ತಿ ಮಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನೈಜ್ಯವಾಗಿ ಸಾಕ್ಷರತೆ ಕಡಿಮೆ ಇರುವ ಆ ಭಾಗದಲ್ಲಿ ಎನ್ಯುಮರೇಷನ್ ಅರ್ಜಿ ತುಂಬಲು ಕಾಂಗ್ರೆಸ್ ಬಿಎಲ್‌ಒಗಳು ಸಹಾಯ ಮಾಡುತ್ತಿದ್ದಾರೆ. ಒಬ್ಬೊಬ್ಬರಿಗೆ ನೆರವಾಗುವ ಬದಲು ಸಾಮೂಹಿಕವಾಗಿ ಎಲ್ಲರನ್ನೂ ಒಂದೆಡೆ ಸೇರಿಸಿ ಅರ್ಜಿ ಭರ್ತಿಮಾಡುವ ಬಗ್ಗೆ ತಿಳಿಸುತ್ತಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ,ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಬಿ.ಎಂ. ರಾಮು, ಮಹೇಶ್ ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News