26 ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕಾತಿ ಆದೇಶ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ಬ್ಯಾಕ್ಲಾಗ್ ಅಡಿಯಲ್ಲಿ ಬಾಕಿ ಉಳಿದಿದ್ದ 26 ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಕಾರ್ಯಸ್ಥಳ ನಿಯೋಜನೆ ಮಾಡಲಾಗಿದ್ದು, ಆ ಎಲ್ಲ ಅಭ್ಯರ್ಥಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಶಾಂತಿನಗರದಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನೇಮಕಾತಿ ಆದೇಶ ನೀಡಿದರು.
‘2017ನೆ ಸಾಲಿನಲ್ಲಿ ಎಸ್ಸಿ-ಎಸ್ಟಿ ಮೀಸಲಾತಿಯ 36 ಹುದ್ದೆಗಳನ್ನು ಹಿಂಬಾಕಿ ಹುದ್ದೆಗಳೆಂದು ಗುರುತಿಸಲಾಗಿದ್ದು, ಆ ಪೈಕಿ 1 ಸಹಾಯಕ ಲೆಕ್ಕಿಗ, 8 ಕುಶಲಕರ್ಮಿ, 6 ಸಹಾಯಕ ಸಂಚಾರ ನಿರೀಕ್ಷಕ, 3 ತಾಂತ್ರಿಕ ಸಹಾಯಕ ಹಾಗೂ ಏಳು ಸಾರಿಗೆ ಪೇದೆ ಹುದ್ದೆಗಳಿಗೆ ಒಟ್ಟು 25 ಅಭ್ಯರ್ಥಿಗಳು ಆಯ್ಕೆಗೊಂಡಿರುತ್ತಾರೆ. ಸದರಿ 26 ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಕಾರ್ಯಸ್ಥಳ ನಿಯೋಜನೆ ಮಾಡಲಾಗಿದೆ.
ಅಲ್ಲದೆ, 2024ನೇ ಸಾಲಿನಲ್ಲಿ 1,619 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರನ್ನು ನೇರ ನೇಮಕಾತಿ ಮೂಲಕ ಹಾಗೂ 100 ಮೃತರಾವಲಂಬಿತರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಒಟ್ಟು 1,745 ನೇಮಕಾತಿ ಒಂದೂವರೆ ವರ್ಷದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನಡೆದಿರುತ್ತದೆ.
ನಿಗಮದಲ್ಲಿ 1,014 ಹೊಸ ಬಿಎಸ್-6 ಮಾದರಿಯ ಬಸ್ಗಳನ್ನು ಸೇರ್ಪಡೆಗೊಳಿಸಲಾಗಿದ್ದು, 123 ನಗರ ಸಾರಿಗೆ ಬಸ್ ಹಾಗೂ 56 ಪ್ರೀಮಿಯಂ ಬಸ್ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.