×
Ad

ಕನ್ನಡದಲ್ಲಿ ಆರ್ಥಿಕ, ಸಮಾಜಶಾಸ್ತ್ರ ವಿಷಯಕ್ಕೆ ಸಂಬಂಧಪಟ್ಟ ಕೃತಿಗಳೇ ಕಡಿಮೆ : ಶಿವಸುಂದರ್

Update: 2025-07-12 21:24 IST

ಬೆಂಗಳೂರು : ಕನ್ನಡ ಸಾಹಿತ್ಯ ಹಲವಾರು ವಿಷಯಗಳಲ್ಲಿ ಮುಂದಿದೆ. ಜ್ಞಾನಪೀಠ ಪ್ರಶಸ್ತಿಗಳ ಮಾನದಂಡಗಳ ಆಧಾರದಲ್ಲಿ ನೋಡುವುದಾದರೆ ಬೇರೆ ಭಾಷೆಗಳಿಗಿಂತ ಸಾಂಸ್ಕೃತಿಕ, ಸಾಹಿತ್ಯಕವಾಗಿ ಮುಂದಿರುವ ಭಾಷೆಯಾಗಿದೆ. ಆದರೆ ನಿರ್ದಿಷ್ಟವಾಗಿ ಆರ್ಥಿಕ, ಸಮಾಜಶಾಸ್ತ್ರ ವಿಷಯಗಳಿಗೆ ಸಂಬಂಧಪಟ್ಟಂತೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕೃತಿಗಳೇ ಕಡಿಮೆ ಎಂದು ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಕೃತಿ ಪುಸ್ತಕ ಹಾಗೂ ಜೀರುಂಡೆ ಪುಸ್ತಕ ಪ್ರಕಾಶನ ಹೊರತಂದಿರುವ ಲೇಖಕ ಅಶೋಕ್ ಕುಮಾರ್ ರಚಿಸಿರುವ ‘ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ’, ‘ಏಕಸ್ವಾಮ್ಯ ಖರೀದಿ ಬಂಡವಾಳ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ನಿರ್ದಿಷ್ಟವಾಗಿ ರಾಜಕೀಯ ಅರ್ಥಶಾಸ್ತ್ರಗಳಿಗೆ ಸಂಬಂಧಪಟ್ಟತೆ ಕನ್ನಡದಲ್ಲಿ ತೀರ ಕಡಿಮೆ. ಅದರಲ್ಲೂ ಮಾರ್ಕ್ಸ್‌ ವಾದಿ ರಾಜಕೀಯ ಅರ್ಥಶಾಸ್ತ್ರದ ಕೃತಿಗಳು ಇನ್ನೂ ಕಡಿಮೆ ಎಂದರು.

ಏಕಸ್ವಾಮ್ಯವು ಹಲವರು ಇರುವ ಕಡೆ ಕೆಲವರೇ ಆಗುತ್ತಾ, ಕೆಲವರು ಇರುವ ಕಡೆ ಒಬ್ಬರೇ ಆಗುತ್ತಾ ಮಾಲಕರು ಉತ್ಪಾದನೆ ಮಾಡುವ ಸರಕುಗಳಿಗೆ ಇಷ್ಟ ಬಂದಂತೆ ಬೆಲೆ ಏರಿಕೆ ಮಾಡುತ್ತಾರೆ. ಭಾರತ, ಚೀನಾ, ವಿಯೇಟ್ನಾಂ ಸೇರಿದಂತೆ ಮಧ್ಯ ಅಮೆರಿಕದ ಹಲವಾರು ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಶ್ರಮದ ಸುಳಿಗೆ ಆಗುತ್ತಿರುವುದು, ಅಮಾನುಷವಾದ ಪರಿಸ್ಥಿತಿಯಲ್ಲಿ ಜನ ದುಡಿಮೆ ಮಾಡುತ್ತಿರುವುದು ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮತ್ತು ಸಿದ್ದ ಉಡುಪು ಕ್ಷೇತ್ರದಲ್ಲಿ ಎಂದು ಶಿವಸುಂದರ್ ಕಳವಳ ವ್ಯಕ್ತಪಡಿಸಿದರು.

ಮಾರ್ಕ್ಸ್‌ ವಾದ ಮತ್ತು ರಾಜಕೀಯ ಅರ್ಥಶಾಸ್ತ್ರ ಕಗ್ಗಂಟಾದ ರೀತಿಯಲ್ಲಿದೆ. ಮಾರ್ಕ್ಸ್‌ ವಾದದ ಕನ್ನಡ ಅನುವಾದವು ಇನ್ನಷ್ಟು ಕಠಿಣವಾಗಿದೆ. ಆದರೆ ಮಾರ್ಕ್ಸ್‌ವಾದ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾದದ್ದು. ಅದರಲ್ಲೂ ಜಗತ್ತಿನ ಹಲವಾರು ಚಾರಿತ್ರಿಕ ವಿದ್ಯಮಾನಗಳನ್ನು ಅರ್ಥ ಮಾಡಿಕೊಂಡು ಬಂಡವಾಳಶಾಹಿ ವ್ಯವಸ್ಥೆ ಎಲ್ಲಿಂದ ಬಂತು, ಅದನ್ನು ಮುರಿಯುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ, ಗೆಲವು ಸಾಧಿಸುವುದು ಕಷ್ಟ ಎಂದು ಅವರು ನುಡಿದರು.

ಮಾರ್ಕ್ಸ್‌ವಾದದ ದೃಷ್ಟಿಯಿಂದ ಜಗತ್ತನ್ನು ನೋಡಿದಾಗ, ವಿಶ್ಲೇಷಣೆಗಳು ಹೇಗೆ ಶಕ್ತಿ ಕೊಡುತ್ತದೆ ಮತ್ತು ಬದಲಾವಣೆಯ ಬಗ್ಗೆ ಭರವಸೆ ಕೊಡುತ್ತದೆ ಎನ್ನುವುದಕ್ಕೆ ಈ ಪುಸ್ತಕಗಳೇ ಸಾಕ್ಷಿ. ಮಾರ್ಕ್ಸ್‌ವಾದಿ ಕಾರ್ಯಕರ್ತರಿಗೆ ಒಂದು ವಿಷಯವನ್ನು ಹೇಗೆ ನೋಡಬೇಕು ಎನ್ನುವದಕ್ಕೆ ಇದು ಮಾಕ್ರ್ಸಿಸ್ಟ್ ಟೂಲ್‍ಕಿಟ್ ಆಗಿದೆ ಎಂದು ಲೇಖಕ ಅಶೋಕ್ ಕುಮಾರ್ ಕೃತಿಗಳಲ್ಲಿ ತಿಳಿಸಿದ್ದಾರೆ ಎಂದು ಶಿವಸುಂದರ್ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಲೇಖಕರಾದ ಡಾ.ಮಂಜುನಾಥ್ ಬಿ.ಆರ್., ನಟ ಚೇತನ್ ಅಹಿಂಸಾ, ಡಾ.ಟಿ.ಪದ್ಮಶ್ರೀ, ಡಾ.ಮಂಗಳಾ, ಆಕೃತಿ ಪ್ರಕಾಶನದ ಗುರುಪ್ರಸಾದ್, ಜೀರುಂಡೆ ಪ್ರಕಾಶನದ ಧನಂಜಯ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News