×
Ad

ಬಿಜೆಪಿಯ ಮತಗಳ್ಳತನ ಜನರ ಗಮನಕ್ಕೆ ತರಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-07-31 15:52 IST

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo credit: X)

ಬೆಂಗಳೂರು, ಜು.31: “ಬಿಜೆಪಿ ಮತಗಳ್ಳತನ ನಡೆಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿ ಮತಗಳ್ಳತನದ ಬಗ್ಗೆ ಪ್ರತಿಭಟನಾ ಸಭೆ ಅಥವಾ ರ್ಯಾಲಿ ಮಾಡಬೇಕೇ ಎನ್ನುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಹೋಟೆಲ್ ನಲ್ಲಿಂದು ನಡೆದ ಕ್ವಾಂಟಮ್ ಶೃಂಗಸಭೆಯ ನಂತರ ಅವರು ರಾಹುಲ್ ಗಾಂಧಿಯವರ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.

“ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯವರು ಚುನಾವಣಾ ಅಕ್ರಮ ಎಗಸಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದಲೂ ಸಂಶೋಧನೆ ನಡೆದಿದೆ. ಆದರೆ ಜನ ಸೇರುವುದರ ಕುರಿತು ನ್ಯಾಯಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳು ಇರುವ ಕಾರಣಕ್ಕೆ ಪ್ರತಿಭಟನೆಯ ಸ್ವರೂಪವನ್ನು ಚರ್ಚೆ ಮಾಡಲಾಗುವುದು” ಎಂದರು.

ಮತಗಳ್ಳತನದ ವಿರುದ್ದ ಪ್ರತಿಭಟನೆ ನಗರದ ಒಳಗೆ ಹಮ್ಮಿಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ರಾಜಕೀಯ ನಿಲುವಿನ ಬಗ್ಗೆ ಬೇರೆಯವರಿಗೆ ಏಕೆ ಇರುಸು ಮುರುಸಾಗುತ್ತಿದೆ. ನಾವು ಏಕೆ ಬೇರೆಯವರಿಗೆ ಇದರ ಬಗ್ಗೆ ಉತ್ತರಿಸಬೇಕು. ನಾವು ಕರ್ನಾಟಕದ ಜನರಿಗೆ ಉತ್ತರದಾಯಿಗಳು. ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು. ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ. ಬದಲಾಗಿ ಜನರನ್ನು ಎಚ್ಚರಗೊಳಿಸಲು ಬರುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ಉಳಿಯಬೇಕು. ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗುವುದನ್ನು ತಪ್ಪಿಸಬೇಕು” ಎಂದರು.

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಐಟಿ ಕಂಪೆನಿಗಳಿಗೆ ಮುಕ್ತ ಸ್ವಾಗತ:

"ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಲಸೆ ಬರುವ ಐಟಿ ಕಂಪನಿಗಳನ್ನು ನಾವು ಸ್ವಾಗತಿಸುತ್ತೇವೆ. ನಾವು ಈ ಕಂಪನಿಗಳಿಗೆ ತಂತ್ರಜ್ಞಾನ, ವಿದ್ಯುತ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲು ತಯಾರಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

“ನಾಲ್ಕು ದಿನಗಳ ಹಿಂದೆ ಮಹರಾಷ್ಟ್ರದ ಉಪಮುಖ್ಯಮಂತ್ರಿಯವರು ಪುಣೆಯಿಂದ ಬೆಂಗಳೂರಿಗೆ ಐಟಿ ಕಂಪೆನಿಗಳು ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ನಾವು ದೇಶದ ಇತರೆ ರಾಜ್ಯಗಳ ಜೊತೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ” ಎಂದರು.

“ಮಹಾರಾಷ್ಟ್ರವೂ ಸಹ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ರಾಜ್ಯ. ಅಲ್ಲಿನ ಐಟಿ ಹಬ್ ಪುಣೆಯ ಹಿಂಜವಾಡಿಯು ಅತ್ಯಂತ ಪ್ರಮುಖ ಐಟಿ ಪ್ರದೇಶ. ಆದರೆ ನಮ್ಮ ರಾಜ್ಯಕ್ಕೆ ಬರುವ ಕಂಪನಿಗಳನ್ನು ನಾವು ಮುಕ್ತವಾಗಿ ಸ್ವಾಗತಿಸಿ ಬೆಂಬಲಿಸುತ್ತೇವೆ” ಎಂದರು.

ಹನಿಟ್ರ್ಯಾಪ್ ತನಿಖೆ ನನಗೆ ಏನೂ ಗೊತ್ತಿಲ್ಲ

ರಾಜಣ್ಣ ಅವರ ಹನಿಟ್ಯ್ರಾಪ್ ವಿಚಾರದಲ್ಲಿ ಸಾಕ್ಷ್ಯಗಳಿಲ್ಲ ಎನ್ನುವ ಸಿಐಡಿ ವರದಿಯ ಬಗ್ಗೆ ಕೇಳಿದಾಗ, “ನನಗೂ ಇದಕ್ಕೂ ಏನು ಸಂಬಂಧ. ಯಾರು ದೂರು ನೀಡಿದ್ದು ಗೊತ್ತಿಲ್ಲ, ತನಿಖೆ ನಡೆದಿದ್ದು ಗೊತ್ತಿಲ್ಲ. ಇದನ್ನು ನಿಮ್ಮ (ಮಾಧ್ಯಮಗಳ) ಬಾಯಲ್ಲೇ ಕೇಳುತ್ತಿದ್ದೇನೆ. ನನಗೆ ಏನೂ ಗೊತ್ತಿಲ್ಲ” ಎಂದರು.

ಕೆಎಂಎಫ್ ಅಧ್ಯಕ್ಷಗಾದಿಯ ಬಗ್ಗೆ ಕೇಳಿದಾಗ, “ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಧ್ಯಕ್ಷಗಾದಿ ವಿಚಾರ ಮಾಧ್ಯಮಗಳ ಸೃಷ್ಟಿ. ಇದರ ಬಗ್ಗೆ ಸಂಘದ ಪದಾಧಿಕಾರಿಗಳು ನೋಡಿಕೊಳ್ಳುತ್ತಾರೆ” ಎಂದರು.

ಆಭರಣ ಮಳಿಗೆ ಉದ್ಘಾಟನೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಈ ಕುಟುಂಬ ಅನೇಕ ವರ್ಷಗಳಿಂದ ನನಗೆ ಆತ್ಮೀಯರು. ಇಪ್ಪತ್ತನೇ ಮಳಿಗೆಯನ್ನು ಉದ್ಘಾಟನೆ ಮಾಡಿದ್ದೇನೆ. ಇದು 200 ಮಳಿಗೆಗಳಾಗಿ ಬೆಳೆಯಲಿ ಎಂದು ಆಶೀಸುತ್ತೇನೆ. ಈ ಕುಟುಂಬದವರು ನನ್ನನ್ನು ಚಿಕ್ಕವಯಸ್ಸಿನಿಂದಲೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಮೂಲತಃ ಉಡುಪಿಯವರಾದ ಇವರ ಮಳಿಗೆಗಳು ಬೆಂಗಳೂರಿನಲ್ಲಿ ಹೆಚ್ಚಿವೆ. ಸ್ಥಳೀಯರಾದ ಇವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News