‘ಎಸ್‌ಐಆರ್’ ಸ್ಥಳಾಂತರಗೊಂಡವರನ್ನು ಡಿಲೀಟೆಡ್ ಎಂದು ಪರಿಗಣಿಸುವುದು ಅಪರಾಧ : ನೂರ್ ಶ್ರೀಧರ್

Update: 2026-08-04 23:40 IST

ಬೆಂಗಳೂರು : ಮತಿಭ್ರಮಣೆಗೆ ಒಳಗಾದವರು ಅಥವಾ ಅಕ್ರಮ ವಲಸಿಗರು ಎಂದು ಸಾಬೀತಾಗದ ಹೊರತು ಯಾರ ಮತವನ್ನು ಅಳಿಸಲು (ಡಿಲೀಟ್) ಬರುವುದಿಲ್ಲ. ಕ್ಷೇತ್ರದಿಂದ ಸ್ಥಳಾಂತರಗೊಂಡವರನ್ನು ಒಳಗೊಳ್ಳುವ ಯಾವ ಪ್ರಯತ್ನವೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿಲ್ಲ. ಹೀಗಾಗಿ ಯಾರದೇ ಮತದ ಹಕ್ಕನ್ನು ಬೇರೆಡೆ ಹೋಗಿದ್ದಾರೆ ಎಂಬ ಕಾರಣಕ್ಕೆ ಡಿಲೀಟೆಡ್ ಎಂದು ಪರಿಗಣಿಸುವುದು ಅಪರಾಧ ಎಂದು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ‘ಎದ್ದೇಳು ಕರ್ನಾಟಕ’ ಪದಾಧಿಕಾರಿ ನೂರ್ ಶ್ರೀಧರ್ ಹೇಳಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ನ ಪರಿಶೀಲನೆ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ರಾಜ್ಯದ 1.10ಕೋಟಿ(ಶೇ.19.95) ಮತದಾರರು ಡಿಲೀಟ್ ಪಟ್ಟಿಯಲ್ಲಿದ್ದಾರೆ. ಪ್ರತಿ ಐದು ಜನರಲ್ಲಿ ಒಬ್ಬರು ಪಟ್ಟಿಯಿಂದ ಹೊರಹೋಗುವ ಎಲ್ಲ ಸಾಧ್ಯತೆಗಳಿವೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿನ ಸರಾಸರಿ ಶೇ.45-50ರಷ್ಟು ಮಂದಿ ಕಾಣೆಯಾಗಲಿದ್ದಾರೆ. ಗಡಿಭಾಗಗಳಲ್ಲಿರುವ ಹಾಗೂ ವಲಸೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿಯೂ ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ನೂರ್ ಶ್ರೀಧರ್ ಆತಂಕ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಪದಾಧಿಕಾರಿ ಮುಹಮ್ಮದ್ ಯೂಸುಫ್ ಕನ್ನಿ ಮಾತನಾಡಿ, ನೀವು ಡಿಲೀಟ್ ಮಾಡಲು ಹೊರಟಿರುವ ಶೇ.20ರಷ್ಟು ಮತದಾರರಲ್ಲಿ ಶೇ.15ರಷ್ಟು ಬೇರೆಡೆಗೆ ಸ್ಥಳಾಂತರಗೊಂಡಿರುವವರು ಮತ್ತು ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದವರು. ಅಂದರೆ ಸತ್ತವರೂ ಅಲ್ಲ, ಎರಡು ಕಡೆ ನೋಂದಣಿ ಆದವರೂ ಅಲ್ಲ. ಅವರೆಲ್ಲರೂ ಜೀವಂತ ಮತದಾರರು. ರಾಜ್ಯದ ಒಂದು ಕೋಟಿ ಜೀವಂತ ಮತದಾರರನ್ನು ನೀವು ಡಿಲೀಟ್ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಮಾತನಾಡಿ, ಚುನಾವಣಾ ಆಯೋಗ ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

ಈ ವೇಳೆಯಲ್ಲಿ ಹೋರಾಟಗಾರರು ಸಂವಿಧಾನ ವಿರೋಧಿ ಎಸ್‌ಐಆರ್‌ಅನ್ನು ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಡಬ್ಲೂಯಪಿಐನ ತಾಹೇರ್ ಹುಸೇನ್, ಎಸ್‌ಯುಸಿಐನ ಕೆ.ವಿ.ಭಟ್, ಆಮ್ ಆದ್ಮಿ ಪಾರ್ಟಿಯ ಸೀತಾರಾಮ ಗುಂಡಪ್ಪ, ಎಸ್‌ಡಿಪಿಐನ ಅಬ್ದುಲ್ ಮಜೀದ್, ಆಶೀರ್ವಾದ್ ಸೆಂಟರ್‌ನ ಫಾ. ಅರುಣ್ ಲೂಯಿಸ್, ಶಾಂತಿಗಾಗಿ ನಾಗರಿಕರ ವೇದಿಕೆಯ ಪ್ರೊ.ವಿ.ಎಸ್.ಶ್ರೀಧರ, ಎದ್ದೇಳು ಕರ್ನಾಟಕದ ತಾರಾ ರಾವ್, ಕೆ.ಎಲ್.ಅಶೋಕ್, ಅಮ್ಜದ್ ಪಾಷಾ, ದಲಿತ ಕ್ರೈಸ್ತರ ಒಕ್ಕೂಟದ ರೆ.ಡಾ.ಮನೋಹರ ಚಂದ್ರಪ್ರಸಾದ್, ವಿಚಾರವಾದಿಗಳ ವೇದಿಕೆಯ ನಾಗೇಶ್ ಅರಳಕುಪ್ಪೆ ಇದ್ದರು.

ಒತ್ತಾಯಗಳು

► ಇಷ್ಟು ಡಿಲೀಷನ್ ಏಕಾಯಿತು? ಎಂಬ ಕುರಿತು ಸಮಗ್ರ ಅವಲೋಕನ ಆಗಬೇಕು. ಸಾಮಾಜಿಕ ಸಂಘಟನೆಗಳಿಗೂ ಇದರಲ್ಲಿ ವಿಚಾರ ಮಂಡಿಸಲು ಅವಕಾಶ ನೀಡಬೇಕು.

► ಸ್ಥಳಾಂತರಗೊಂಡವರನ್ನು, ಮನೆಯಲ್ಲಿ ಇಲ್ಲದಿದ್ದವರನ್ನು ಯಾವುದೇ ಕಾರಣಕ್ಕೂ ಡಿಲೀಟ್ ಪಟ್ಟಿಗೆ ಸೇರಿಸಬಾರದು. ಅವರು ಇರುವ ಸ್ಥಳಗಳಲ್ಲೇ ಗಣತಿ ನಮೂನೆ ಮತ್ತು ನಮೂನೆ 8 ಅನ್ನು ಕೊಡುವ ವ್ಯವಸ್ಥೆ ಆಗಬೇಕು.

► ಮೂಲಭೂತ ದೋಷವನ್ನು ಸರಿಪಡಿಸಲು ಗಣತಿ ನಮೂನೆ ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳಿಗೆ ವಿಸ್ತರಿಸಬೇಕು.

► ಕರಡು ಪಟ್ಟಿ ಪ್ರಕಟವಾದ ನಂತರ ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವ ನಿರ್ದೇಶನದಂತೆ ಪ್ರತಿ ಬೂತ್ ಪ್ರದೇಶಗಳಲ್ಲಿ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News