ದಸರಾ ಸಂಭ್ರಮಕ್ಕೆ ವಿವಾದದ ಮಸಿ ಬಳಿದಿರುವ ಸಿಎಂ : ಆರ್.ಅಶೋಕ್
ಬೆಂಗಳೂರು, ಆ.29: ನಾಡಹಬ್ಬ ದಸರಾ ಸಂಭ್ರಮಕ್ಕೆ ವಿವಾದದ ಮಸಿ ಬಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನನ್ನ 5 ಪ್ರಶ್ನೆಗಳು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೇಳಿದ್ದಾರೆ.
ಶುಕ್ರವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಬಾನು ಮುಷ್ತಾಕ್ ಅವರ ಕೈಯಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಮಾಡಿಸಬೇಕು ಎನ್ನುವ ಐಡಿಯಾ ಯಾರದು? ಇದು ಮುಖ್ಯಮಂತ್ರಿಗಳ ಐಡಿಯಾನೊ ಅಥವಾ ಅವರ ಸಂಪುಟ ಸಹೋದ್ಯೋಗಿಗಳ ಐಡಿಯಾನೊ? ಅಥವಾ ಇದು ಕೂಡ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಕುಮ್ಮಕ್ಕು ಕೊಟ್ಟಿದ್ದ ಸ್ವಘೋಷಿತ ಬುದ್ಧಿಜೀವಿ, ಎಡಪಂಥೀಯ ನಗರ ನಕ್ಸಲರ ಐಡಿಯಾನೊ? ಎಂದು ಪ್ರಶ್ನಿಸಿದ್ದಾರೆ.
ಬಾನು ಮುಷ್ತಾಕ್ ಅವರನ್ನು ಮುಂದಿನ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಅದು ಅವರಿಗೂ ಗೌರವ ತರುತ್ತಿತ್ತು. ಆದರೆ ಬಾನು ಮುಷ್ತಾಕ್ ಅವರಿಗೂ ಹಿಂದೂಗಳ ಆರಾಧ್ಯ ದೇವತೆ ತಾಯಿ ದುರ್ಗೆಯ ನವರೂಪಗಳನ್ನು ಪೂಜಿಸಿ ಆರಾಧಿಸುವ ದಸರಾ, ನವರಾತ್ರಿಗೂ ಏನು ಸಂಬಂಧ? ಎಂದು ಅಶೋಕ್ ಕೇಳಿದ್ದಾರೆ.
ನಮ್ಮ ತಾಯ್ನೆಲಕ್ಕೆ, ನಮ್ಮ ಜೀವನಾಡಿಯಾಗಿರುವ ನದಿಗಳಿಗೆ ಹೆಣ್ಣಿನ ಹೆಸರಿಟ್ಟು ತಾಯಿ ಸ್ಥಾನದಲ್ಲಿ ಕೂರಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಅದಕ್ಕಾಗಿಯೆ ರಾಷ್ಟಕವಿ ಕುವೆಂಪು ಅವರು ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ನಮ್ಮ ನಾಡಗೀತೆಯಲ್ಲಿ ಹೇಳಿರುವುದು. ಅದಕ್ಕಾಗಿಯೇ ನಾವು ‘ಕನ್ನಡ ನಾಡಿನ ಜೀವ ನದಿ ಈ ಕಾವೇರಿ ಎಂದು ಹಾಡುವುದು ಎಂದು ಅವರು ತಿಳಿಸಿದ್ದಾರೆ.
ಆದರೆ, ಕನ್ನಡಾಂಬೆಯನ್ನು ಭುವನೇಶ್ವರಿಯ ಸ್ಥಾನದಲ್ಲಿ ಕೂರಿಸಿ ಕನ್ನಡಮ್ಮನನ್ನು ದೌರ್ಜನ್ಯ ಮಾಡುತ್ತಿದ್ದೀರಿ ಎನ್ನುವ ಅಭಿಪ್ರಾಯ, ಮನಸ್ಥಿತಿ ಇರುವ ವ್ಯಕ್ತಿಯೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸಿದರೆ, ಅವರು ನಾಳೆ ತಾಯಿ ಚಾಮುಂಡೇಶ್ವರಿಯನ್ನು ಆನೆಯ ಅಂಬಾರಿ ಮೇಲೆ ಕೂರಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ ಕ್ಯಾತೆ ತೆಗೆಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರೆಂಟಿ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ನಮ್ಮ ನೆಲ, ಜಲ, ಸಂಸ್ಕೃತಿಯ ಬಗ್ಗೆ ಗೌರವ, ಸಂವೇದನೆಯೆ ಇಲ್ಲದ ಒಬ್ಬ ವ್ಯಕ್ತಿಯಿಂದ ನಾಡಹಬ್ಬ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ? ಇದು ತಾಯಿ ಚಾಮುಂಡೇಶ್ವರಿಯ ಅಸಂಖ್ಯಾತ ಆಸ್ತಿಕ ಭಕ್ತರಿಗೆ, ಚಾಮುಂಡಿ ಬೆಟ್ಟವನ್ನು ಪವಿತ್ರ ಶಕ್ತಿಪೀಠ ಎಂದು ನಂಬಿರುವ ಹಿಂದುಗಳಿಗೆ ಮಾಡುವ ಅಪಮಾನ ಅಲ್ಲವೇ? ಎಂದು ಅವರು ಕೇಳಿದ್ದಾರೆ.
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದರೆ, ಅದು ಸಹಜವಾಗಿ ವಿವಾದವಾಗುತ್ತದೆ, ಅದಕ್ಕೆ ವಿರೋಧ ವ್ಯಕ್ತವಾಗುತ್ತದೆ ಎಂಬ ವಿಷಯ ಸರಕಾರಕ್ಕೆ ತಿಳಿಯದೆ ಏನೂ ಇಲ್ಲ. ಆದರೂ ಹಠಕ್ಕೆ ಬಿದ್ದವರಂತೆ, ಉದ್ದೇಶಪೂರ್ವಕವಾಗಿ ವಿವಾದಕ್ಕೆ ಎಡೆಮಾಡಿಕೊಡುವ ವ್ಯಕ್ತಿಯನ್ನೆ ಆಯ್ಕೆ ಮಾಡಿದ್ದು ಯಾಕೆ? ಇದರಿಂದ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ನಾಡಿನ ಜನತೆಗೆ, ಅದರಲ್ಲೂ ವಿಶೇಷವಾಗಿ ಹಿಂದೂಗಳಿಗೆ ಏನು ಸಂದೇಶ ಕೊಡಲು ಹೊರಟಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಧರ್ಮಸ್ಥಳ, ಚಾಮುಂಡಿ ಬೆಟ್ಟ ಇವೆಲ್ಲವೂ ಒಂದಲ್ಲ ಒಂದು ದಿನ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣದ ಮುಂದೆ ತಲೆ ಬಾಗಲೇಬೇಕು ಬೇಕು ಎನ್ನುವ ಎಚ್ಚರಿಕೆಯೋ? ಅಥವಾ ನಾವು ಎಷ್ಟೇ ಬಹಿರಂಗವಾಗಿ, ಹಿಂದೂಗಳನ್ನು ಅಣಕಿಸುವಂತೆ ತುಷ್ಟೀಕರಣ ರಾಜಕಾರಣ ಮಾಡಿದರೂ, ವೋಟ್ ಬ್ಯಾಂಕ್ ರಾಜಕಾರಣದಿಂದ ಗೆದ್ದು ಬರುತ್ತೇವೆ ಎನ್ನುವ ಅಹಂಕಾರದ ಧೋರಣೆಯೋ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.