ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಂಧಿತ ಇಬ್ಬರು ಶಂಕಿತ ಆರೋಪಿಗಳು 10 ದಿನ NIA ಕಸ್ಟಡಿಗೆ
Update: 2024-04-13 13:11 IST
Photo source: PTI
ಬೆಂಗಳೂರು, ಎ.13: ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ. ಅಧಿಕಾರಿಗಳು ಕೊಲ್ಕತ್ತಾ ಬಳಿ ಬಂಧಿಸಿದ್ದ ಇಬ್ಬರು ಶಂಕಿತ ಪ್ರಮುಖ ಆರೋಪಿಗಳನ್ನು ಇಂದು ಬೆಳಗ್ಗೆ ಬೆಂಗಳೂರಿಗೆ ಕರೆ ತಂದಿದ್ದಾರೆ.
ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾ ಎಂಬವರನ್ನು ಇಂದು ಎನ್.ಐ.ಎ. ಅಧಿಕಾರಿಗಳು ಕೋರಮಂಗಲದಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದರು.
ಈ ವೇಳೆ ಸ್ಫೋಟ ಪ್ರಕರಣದಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಾಹಾ ಪ್ರಮುಖ ರೂವಾರಿಗಳು. ಇಬ್ಬರನ್ನೂ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಒಪ್ಪಿಸುವಂತೆ ಎಂದು ಎನ್ಐಎ ಅಧಿಕಾರಿಗಳ ಪರ ವಕೀಲರು ನ್ಯಾಯಾಲಯವನ್ನು ಕೋರಿದರು.
ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಇಬ್ಬರೂ ಶಂಕಿತರನ್ನು 10 ದಿನ ಎನ್.ಐ.ಎ. ವಶಕ್ಕೆ ಒಪ್ಪಿಸಿದ್ದಾರೆ.
ಬಳಿಕ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಮಡಿವಾಳ ವಿಶೇಷ ವಿಚಾರಣಾ ಕೊಠಡಿಗೆ ಕರೆದೊಯ್ದರು.