×
Ad

ಗಿಗ್ ಕಾರ್ಮಿಕರ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ | ಯಶಸ್ಸಿನ ಶ್ರೇಯ ರಾಹುಲ್ ಗಾಂಧಿಗೆ ಸಲ್ಲಬೇಕು : ಸಚಿವ ಸಂತೋಷ್‌ ಲಾಡ್

Update: 2025-05-29 23:08 IST

ಬೆಂಗಳೂರು : ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಕ್ರಮದ ಸಾಕಾರದ ಶ್ರೇಯ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಲ್ಲಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದ್ದಾರೆ.

ಗುರುವಾರ ರಾಜಭವನದಲ್ಲಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‍ರನ್ನು ಗಿಗ್ ಕಾರ್ಮಿಕರೊಂದಿಗೆ ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿದರು. ಆ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರ ಐತಿಹಾಸಿಕ ಗಿಗ್ ಕಾರ್ಮಿಕರ ಸುಗ್ರೀವಾಜ್ಞೆಗೆ ಅಂಕಿತ ದೊರೆತಿರುವುದು ತುಂಬ ಖುಷಿ ತಂದಿದೆ. ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ, ಗಿಗ್ ಕಾರ್ಮಿಕರ ಬಗ್ಗೆ ಪ್ರಸ್ತಾಪ ಮಾಡಿದ್ದೇ ಇಂದು ಇಂತಹ ಮಹತ್ವದ ಕಾಯ್ದೆ ರೂಪಿಸಲು ನಾಂದಿಯಾಗಿದೆ. ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ರೂಪಿಸಬೇಕು ಎಂಬುದು ಅವರ ವಿಷನ್ ಆಗಿತ್ತು ಎಂದರು.

ನಿಗದಿತ ಸಮಯದಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲು ಗಿಗ್ ಕಾರ್ಮಿಕರು ಧಾವಂತದಿಂದ ಗಾಡಿ ಓಡಿಸುತ್ತಾರೆ. ಅವರನ್ನು ನೋಡಿದಾಗಲೆಲ್ಲ, ಅವರಿಗಿರುವ ಒತ್ತಡ, ಅವಸರದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ, ಗಿಜಿಗುಡುವ ಟ್ರಾಫಿಕ್ಕುಗಳಲ್ಲಿ ವಾಹನಗಳ ಹೊಗೆ ಸೇವಿಸಿ ಅವರ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತಿದ್ದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಗ್ರಾಹಕರಿಗೆ ಸೇವೆ ನೀಡಬೇಕು ಎಂಬ ಒಂದೇ ಗುರಿಯಡೆಗೆ ಸಾಗುವ ಗಿಗ್ ಕಾರ್ಮಿಕರಿಗೆ ಮತ್ತೊಂದು ಅವಕಾಶ ಸಿಕ್ಕರೆ ಸಾಮಾಜಿಕ ಹಾಗೂ ಜೀವನ ಭದ್ರತೆ ನೀಡುವ ಯೋಜನೆ ರೂಪಿಸಬೇಕೆಂದುಕೊಳ್ಳುತ್ತಿದ್ದೆ ಎಂದು ಅವರು ನುಡಿದರು.

ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ನಮ್ಮ ಸರಕಾರವು ರೂಪಿಸಿದ ಹೊಸ ಕಾರ್ಯಕ್ರಮಗಳ ಹಿಂದಿನ ಪ್ರೇರಣಾ ಶಕ್ತಿ ನೀವು, ಗಿಗ್ ಕಾರ್ಮಿಕರ ಕಾಳಜಿಯ ಬಗೆಗಿನ ನಿಮ್ಮ ಆಲೋಚನೆ ಸ್ಫೂರ್ತಿಯಾಗಿದೆ. ಈ ಕಾರ್ಮಿಕರು ಎದುರಿಸುವ ಶೋಷಣೆ, ಸವಾಲು, ಅನಿಶ್ಚಿತತೆಗಳನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ನಾವು ರೂಪಿಸಿದಾಗ ನಮ್ಮ ಪ್ರಯತ್ನಗಳಿಗೆ ನಿಮ್ಮ ಸಲಹೆ ಶಕ್ತಿ ನೀಡಿದೆ ಎಂದು ಸಂತೋಷ್ ಲಾಡ್ ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದರು.

ರಾಜ್ಯದ ಸುಗ್ರೀವಾಜ್ಞೆಗೆ ರಾಹುಲ್ ಪ್ರಶಂಸೆ: ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತ ಹಿನ್ನೆಲೆಯಲ್ಲಿ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಗಿಗ್ ಕಾರ್ಮಿಕರಿಗೆ ಕರ್ನಾಟಕ ಹೊಸ ದಾರಿಯೊಂದನ್ನು ತೋರಿಸಿದೆ. ರಾಜ್ಯ ಸರಕಾರವು ಐತಿಹಾಸಿಕ ಕ್ರಮ ಕೈಗೊಂಡಿದೆ. ಇದರಿಂದ ಗಿಗ್ ಕಾರ್ಮಿಕರ ಹಕ್ಕುಗಳಿಗೆ ಗ್ಯಾರಂಟಿ ಸಿಕ್ಕಿದೆ. ಅವರ ಬದುಕಿಗೆ ರಕ್ಷಣೆ ದೊರೆತಿದೆ. ಆತ್ಮಗೌರವ ಬಂದಿದೆ’ ಎಂದು ಹೇಳಿದ್ದಾರೆ.

‘ಬಿಸಿಲು, ಚಳಿ ಮತ್ತು ಗಾಳಿಯನ್ನು ಲೆಕ್ಕಿಸದೆ ಗಿಗ್ ಕಾರ್ಮಿಕರು ಆಹಾರ ಮತ್ತು ಇತರ ಅಗತ್ಯ ಪದಾರ್ಥ ನಮಗೆ ಪೂರೈಸುತ್ತಾರೆ. ಅವರಿಗೆ ಕಾರಣ ನೀಡದೆ ಕೆಲಸದಿಂದ ತೆಗೆಯಲಾಗುತ್ತದೆ. ಆನಾರೋಗ್ಯವಾದರೆ ರಜೆ ಕೊಡುವುದಿಲ್ಲ, ವೇತನ ತಾರತಮ್ಯ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಇವುಗಳಿಗೆ ಅವಕಾಶ ಇಲ್ಲ. ರಾಜಸ್ಥಾನ ದಾರಿ ತೋರಿತ್ತು, ಕರ್ನಾಟಕ ಇದು ಜಾರಿ ಮಾಡಿದೆ ಇನ್ನು ಮುಂದಿನ ಸರದಿ ತೆಲಂಗಾಣ. ಇದು ನಮ್ಮ ವಿಷನ್. ಇದನ್ನು ನಾವು ಎಲ್ಲ ರಾಜ್ಯ ಮತ್ತು ದೇಶಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News