ಚುನಾವಣಾ ಅಕ್ರಮದ ವಿರುದ್ಧ ಹೋರಾಟ : ಸಂತೋಷ್ ಲಾಡ್
ಸಂತೋಷ್ ಲಾಡ್
ಶಿವಮೊಗ್ಗ : ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈ ಬಿಡುವುದು ಸೇರಿ ಚುನಾವಣಾ ಅಕ್ರಮದ ವಿರುದ್ಧ ನಾವು ಹೋರಾಟ ರೂಪಿಸುತ್ತಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತದೆ. ಅಲ್ಲಿ ಲೋಕಸಭಾ, ವಿಧಾನಸಭಾ ಚುನಾವಣೆ ನಂತರ 41 ಲಕ್ಷ ಮತ ಹೆಚ್ಚಾಗುತ್ತದೆ. ಆದರೆ, ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗ 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತದೆ. ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕಿದ್ದಾರೆ. ಆದರೆ, ಮತದಾರರಿಗೆ ಈಗ ವಿಧಾನಸಭಾ ಚುನಾವಣೆಯಲ್ಲಿ ವೋಟ್ ಹಾಕಲು ಅವಕಾಶ ಇಲ್ಲ. ದೇಶದ ಪ್ರಧಾನಿ ಕಳೆದ 11 ವರ್ಷಗಳಿಂದ ಬರೀ ಚುನಾವಣಾ ಪ್ರಚಾರದಲ್ಲೇ ಕಾಲ ಕಳೆದಿದ್ದಾರೆ. ಬಿಹಾರ್ಗೆ ಪದೇಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮಣಿಪುರಕ್ಕೆ ಈ ತನಕ ಹೋಗಿಲ್ಲ ಎಂದರು.
ಮತದಾರರ ಚೀಟಿಗೆ ಆಧಾರ್ ಲಿಂಕ್ ಪದ್ಧತಿಯನ್ನು ಏಕೆ ಅಳವಡಿಸಬಾರದು. ನಾಗರಿಕತ್ವವನ್ನು ಸಾಬೀತುಪಡಿಸುವ ಆಧಾರ್ ಅನ್ನು ಏಕೆ ಅವರು ಕಡೆಗಣಿಸುತ್ತಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ನಡೆದು ಒಂದು ವರ್ಷ ಕಳೆದಿಲ್ಲ. ಅಷ್ಟರೊಳಗೆ 65 ಲಕ್ಷ ಮತದಾರರ ಹೆಸರನ್ನು ಕೈಬಿಡುವುದು ಎಷ್ಟರಮಟ್ಟಿಗೆ ಸರಿ. ಇದೇ ಪ್ರಕ್ರಿಯೆಯನ್ನು ಪಾರ್ಲಿಮೆಂಟ್ ಚುನಾವಣೆಗೆ ಮುನ್ನ ಏಕೆ ಮಾಡಲಿಲ್ಲ. ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದೇ ಅವರ ಉದ್ದೇಶ ಎಂದು ಹೇಳಿದರು.
ಬಿಹಾರದಲ್ಲಿ 70,000 ಕೋಟಿ ರೂ. ದುರ್ಬಳಕೆ ಆಗಿದೆ ಎಂದು ಕೇಂದ್ರದ ಸಿಎಜಿ ವರದಿಯೇ ಹೇಳಿದೆ. ಅಲ್ಲದೆ ಕಳೆದ ಐದು ಅವಧಿಯಿಂದ ಬಿಹಾರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಹೀಗಿದ್ದೂ ಅಭಿವೃದ್ಧಿಯ ವಿಚಾರದಲ್ಲಿ ಬಿಹಾರದ ಪರಿಸ್ಥಿತಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಲಾ ಆದಾಯ ಸಹ ಅಲ್ಲಿ ಕುಸಿಯುತ್ತಿದೆ. ಅಲ್ಲಿ ಅಭಿವೃದ್ಧಿ ಆಗಿದ್ದರೆ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಜನ ಏಕೆ ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿದ್ದರು. ದೇಶದಲ್ಲಿ ಈ ತನಕ 20 ಲಕ್ಷ ಜನ ತಮ್ಮ ಪಾಸ್ಪೋರ್ಟ್ ಅನ್ನು ಸೆರೆಂಡರ್ ಮಾಡಿದ್ದಾರೆ. ದೇಶದಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗಿದ್ದಾರೆ. ಒಂದು ಲಕ್ಷದಲ್ಲಿ 70 ಸಾವಿರದಷ್ಟು ಜನ ಗುಜರಾತ್ನವರೇ ಆಗಿದ್ದಾರೆ. ದೇಶದ ಜನ ಇಲ್ಲಿಂದ ಏಕೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆಗಬೇಕಲ್ಲವೇ ಎಂದರು.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಡೆಯುತ್ತಿದ್ದು ಅದರ ಸ್ಪಷ್ಟ ಚಿತ್ರಣ ನನ್ನ ಬಳಿ ಇಲ್ಲ. ಹಾಗಾಗಿ ತನಿಖೆ ಮುಗಿಯುವವರೆಗೂ ಕಾಯಬೇಕಿದೆ ಎಂದು ತಿಳಿಸಿದರು.
ಧರ್ಮಸ್ಥಳ ಘಟನೆಯಲ್ಲಿ ಕೇರಳದವರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜೋಶಿಯವರು ಅವರಿಗೆ ಅನುಕೂಲ ಆಗುವ ವಿಚಾರವನ್ನಷ್ಟೇ ಮಾತನಾಡುತ್ತಾರೆ. ಅಷ್ಟಕ್ಕೂ ಸೌಜನ್ಯ ಪ್ರಕರಣ ಯಾವಾಗ ನಡೆಯಿತು. ಒಂದು ಪಕ್ಷ ಜೋಶಿ ಅವರ ಬಳಿ ಇದು ಪ್ಲಾಂಟೆಡ್ ಎಂಬ ಬಗ್ಗೆ ದಾಖಲೆ ಇದ್ದರೆ ತಂದು ಕೊಡಲಿ. ಅಷ್ಟೇ ಅಲ್ಲ ಸಿಬಿಐ ಸಹ ಅವರ ಬಳಿ ಇದೆ. ಸುವೋಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ. ಬಿಜೆಪಿಯವರು ಕೇವಲ ಆಯ್ದ ವಿಚಾರಗಳನ್ನು ಅಷ್ಟೇ ಮಾತನಾಡುತ್ತಾರೆ. ಜಿಡಿಪಿ, ತಲಾ ಆದಾಯ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅಷ್ಟಕ್ಕೂ ಮೇಘಾಲಯದಲ್ಲಿ 41,000 ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ. ಇದರ ಬಗ್ಗೆ ಕೇಳಿದರೆ ಮಳೆ ಬಂದು ಕೊಚ್ಚಿ ಹೋಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ ಎಂದು ಹೇಳಿದರು.