ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿಳಿದ ನಟ ಶಿವರಾಜ್ಕುಮಾರ್
ಬೆಂಗಳೂರು : ಅಮೆರಿಕಾದಲ್ಲಿ ಮೂತ್ರಕೋಶ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿರುವ ಚಿತ್ರನಟ ಡಾ.ಶಿವರಾಜ್ಕುಮಾರ್ ಒಂದು ತಿಂಗಳ ನಂತರ ರವಿವಾರ ಬೆಂಗಳೂರಿಗೆ ಮರಳಿದರು.
ಅಮೆರಿಕಾದಿಂದ ದುಬೈಗೆ, ಅಲ್ಲಿಂದ ನೇರವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಶಿವರಾಜ್ಕುಮಾರ್ ದಂಪತಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದಿಂದ ನಾಗವಾರ ರಸ್ತೆಯ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ನಿವಾಸಕ್ಕೆ ಶಿವರಾಜ್ಕುಮಾರ್ ಆಗಮಿಸುತ್ತಿದ್ದಂತೆ, ಅವರಿಗೆ ಸೇಬು ಹಣ್ಣಿನ ಹಾರ ಹಾಕಿ ಅಭಿಮಾನಿಗಳು ಅಭಿಮಾನ ಮೆರೆದರು. ಪಟಾಕಿ ಸಿಡಿಸಿ, ಜೈಕಾರ ಕೂಗಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸ್ನೇಹಿತರು, ಸಂಬಂಧಿಕರು ನನಗೆ ಧೈರ್ಯ ತುಂಬಿದ್ದಾರೆ. ಹೋಗಬೇಕಾದರೆ ಭಾವುಕನಾಗಿದ್ದೆ. ಮನೆಯಲ್ಲಿ ಎಲ್ಲರ ಬೆಂಬಲ ಸಿಕ್ಕಿತು, ಅಲ್ಲಿ ಹೋದ ಮೇಲೆ ಆತವಿಶ್ವಾಸ ಬಂತು. 6 ಗಂಟೆ ಮನೆಯವರಿಗೂ ಚಿಂತೆ ಕಾಡಿತ್ತು. ಎರಡು ಮೂರು ದಿನ ಲಿಕ್ವಿಡ್ ಫುಡ್ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ಲೈಟ್ ವಾಕ್ ಶುರು ಮಾಡಿದೆ ಎಂದರು.
ಜೀವನವೇ ಒಂದು ಪಾಠ. ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತದೆ, ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ ಎಂದು ಭಾವುಕರಾಗಿ ನುಡಿದರು. ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ಶಿವರಾಜ್ಕುಮಾರ್, ಈಗ ನನ್ನ 131ನೇ ಸಿನಿಮಾ ಬಗ್ಗೆ ತಯಾರಿ ನಡೆದಿದೆ. ರಾಮ್ಚರಣ್ ಅವರ ಸಿನಿಮಾ ಮಾಡುತ್ತಿದ್ದೇನೆ ಎಂದರು.