ಎಸ್‌ಐಆರ್: ಡಿಲೀಟ್ ಆದ ಮತದಾರರ ಹಕ್ಕು ಪಡೆಯಲು ಹೋರಾಟ; ಪ್ರತೀ ಜಿಲ್ಲಾವಾರು ಮತ ಕಾವಲು ಕಾನೂನು ತಂಡ ರಚನೆ

Update: 2026-08-02 23:49 IST

ಬೆಂಗಳೂರು : ಎಸ್‌ಐಆರ್‌ನ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಡಿಲೀಟ್ ಆಗುವ ಮತದಾರರ ಹಕ್ಕನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲು ಪ್ರತೀ ಜಿಲ್ಲಾವಾರು ಒಂದೊಂದು ಮತ ಕಾವಲು ಕಾನೂನು ತಂಡವನ್ನು ರಚಿಸಲಾಗುತ್ತಿದೆ ಎಂದು ‘ಎಸ್‌ಐಆರ್ ವಿರೋಧಿ ಕರ್ನಾಟಕ’ ಸಂಘಟನೆ ಘೋಷಿಸಿದೆ.

ರವಿವಾರ ನಗರದ ಶಾಸಕರ ಭವನದಲ್ಲಿ ನಡೆದ ‘ಎಸ್‌ಐಆರ್ ಹಾಗೂ ನಮ್ಮ ಮುಂದಿರುವ ಕಾನೂನಾತ್ಮಕ ಸವಾಲುಗಳು’ ಸಂವಾದದಲ್ಲಿ ಸಂಘಟನೆಯ ಮುಖಂಡ ಹಾಗೂ ವಕೀಲ ಅನೀಸ್ ಪಾಷಾ ಮಾತನಾಡಿ, ಸದ್ಯದಲ್ಲಿ, ಪ್ರತಿ ಜಿಲ್ಲಾವಾರು ಕಾನೂನು ತಂಡ ರಚಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಗ್ರಾಮಗಳಿಗೂ ಈ ತಂಡವನ್ನು ವಿಸ್ತರಿಸಲಾಗುವುದು. ತಂಡದಲ್ಲಿ ನ್ಯಾಯವಾದಿಗಳು, ಚಿಂತಕರು, ಹೋರಾಟಗಾರರು ಇರಲಿದ್ದಾರೆ ಎಂದರು.

ಆಗಸ್ಟ್ 17ಕ್ಕೆ ಚುನಾವಣಾ ಆಯೋಗವು ಬಿಡುಗಡೆಗೊಳಿಸುವ ಎಸ್‌ಐಆರ್ ಕರಡು ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಡಿಲೀಟ್ ಆದಂತಹ ಮತದಾರರನ್ನು ಗುರುತಿಸಿ ಕಾನೂನು ಬದ್ಧವಾಗಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಅವರನ್ನು ಮತಪಟ್ಟಿಗೆ ಸೇರಿಸುವಂತಹ ಕೆಲಸ ಮಾಡಲಾಗುವುದು. ಜೊತೆಗೆ, ಡಿಲೀಟ್ ಆದಂತಹ ಮತಗಳಿಗೆ ಸಂಬಂಧಿಸಿ ಆಯೋಗದ ಮುಂದೆ ಸರಿಯಾದ ದಾಖಲೆಗಳನ್ನಿಟ್ಟು ಮತಗಳು ಡಿಲೀಟ್ ಆಗದಂತೆ ತಡೆಯಲಾಗುವುದು. ಇದನ್ನು ಮತ ಕಾವಲು ಕಾನೂನು ತಂಡ ಮಾಡಲಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕಾರ್ಯದಲ್ಲಿ 1 ಕೋಟಿಗೂ ಅಧಿಕ ಮತದಾರರು ಡಿಲೀಟ್ ಆಗುವ ಸಾಧ್ಯತೆಯಿದೆ. ಯಾವ ಆಧಾರದಲ್ಲಿ, ಏಕೆ ಡಿಲೀಟ್ ಮಾಡಲಾಗುತ್ತಿದೆ. ಇದರ ಹಿಂದೆ ಯಾವ ಕೋಮು ಶಕ್ತಿಗಳಿವೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಈ ನಿಟ್ಟಿನಲ್ಲಿ ಕಾನೂನು ತಂಡ ಕಾರ್ಯನಿರ್ವಹಿಸಲಿದೆ ಎಂದು ಅನೀಸ್ ಪಾಷಾ ತಿಳಿಸಿದರು.

ಸಂವಾದದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಎದ್ದೇಳು ಕರ್ನಾಟಕದ ಮುಖಂಡ ತಾರಾರಾವ್, ವಕೀಲರಾದ ಕೆ.ಪಿ.ಶ್ರೀಪಾಲ್, ಬಿ.ಟಿ.ವಿಶ್ವನಾಥ್, ಮರಿಸ್ವಾಮಿ, ವಿದ್ಯಾರ್ಥಿ ಮುಖಂಡರಾದ ಸರೋವರ್, ಹೇಮಂತ್, ಹಲವರು ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮತಗಳು ಡಿಲೀಟ್ ಆಗಲಿವೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಈ ಪ್ರಕ್ರಿಯೆ ಸಂಪೂರ್ಣ ಕಾನೂನು ಬಾಹಿರವಾಗಿದೆ. ಡಿಲೀಟ್ ಆಗುವಂತಹ ಮತಗಳಲ್ಲಿ ಮಹಿಳೆಯರದ್ದೇ ಎನ್ನಲಾಗುವುದು ದೊಡ್ಡ ದುರಂತ. ಅನಾಥರು, ಅಲೆಮಾರಿಗಳು ಸೇರಿದಂತೆ ದಾಖಲೆಗಳೇ ಇಲ್ಲದ ಅನೇಕರ ಮತಗಳ ಹಕ್ಕನ್ನು ಕಾಪಾಡುವ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳಬೇಕು.

ರಾಜಲಕ್ಷ್ಮೀ ಅಂಕಲಗಿ, ವಕೀಲರು

ಎಸ್‌ಐಆರ್‌ನಲ್ಲಿ ಕಾನೂನಿನ ತೊಡಕುಗಳು ಎದುರಾಗುತ್ತಿವೆ. ಮತದ ಹಕ್ಕನ್ನು ಕಳೆದುಕೊಳ್ಳುವ ಜನಸಾಮಾನ್ಯರಿಗೆ ಕಾನೂನಿನ ಹೋರಾಟ ಸುಲಭದ್ದಲ್ಲ. ಅದಕ್ಕಾಗಿ ಸರಕಾರ ಗ್ರಾಮಸಭೆಗಳು, ವಾರ್ಡ್ ಸಭೆಗಳನ್ನು ನಡೆಸುವುದರಿಂದ ಅನುಕೂಲವಾಗುತ್ತದೆ. ಪಕ್ಷದ ಏಜೆಂಟ್‌ರು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ತಿಳಿದುಬಂದಿದೆ. ಇದರ ಬಗ್ಗೆ ಪಕ್ಷ ಗಂಭೀರವಾಗಿ ತೆಗೆದುಕೊಳ್ಳಬೇಕು.

ಬಿ.ಆರ್.ಪಾಟೀಲ್, ಕಾಂಗ್ರೆಸ್ ಶಾಸಕ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News