ಶಿಕ್ಷಕರ ನೇಮಕಾತಿ | ವಯೋಮಿತಿ ಸಡಿಲಿಕೆ, ಭಾಷಾ ವೈವಿಧ್ಯದ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಿ: ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಆಗ್ರಹ
ಡಾ.ನಸೀಂ ಅಹ್ಮದ್
ಬೆಂಗಳೂರು: ಕರ್ನಾಟಕದಲ್ಲಿ 2026–27ನೇ ಸಾಲಿನ GPSTR ಹಾಗೂ HSTR ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಅಧಿಸೂಚನೆಗಳಲ್ಲಿ ಹಲವು ಗಂಭೀರ ಲೋಪಗಳಿವೆ ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕ ಆರೋಪಿಸಿದ್ದು, ವಯೋಮಿತಿ ಸಡಿಲಿಕೆ, ಉರ್ದು ಭಾಷೆ ಕಲಿತ ಅಭ್ಯರ್ಥಿಗಳಿಗೂ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಈಗಾಗಲೇ ಸರಕಾರವನ್ನು ಒತ್ತಾಯಿಸಿರುವ ಸಾಲಿಡಾರಿಟಿ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ನಸೀಂ ಅಹ್ಮದ್, ಶಿಕ್ಷಣ ಇಲಾಖೆ ಹಾಗೂ ಸರಕಾರದ ಮಟ್ಟದಲ್ಲಿ ಕೂಡಲೇ ಅಗತ್ಯ ತಿದ್ದುಪಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಸಂಘಟನೆಯು ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ GPSTR ಅಧಿಸೂಚನೆಗಳು ಹಾಗೂ ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ವಿಭಾಗಗಳ HSTR ಅಧಿಸೂಚನೆಗಳನ್ನು ಪರಿಶೀಲಿಸಿದ್ದು, ಹಲವು ಅಧಿಸೂಚನೆಗಳಲ್ಲಿ ಸಾಮಾನ್ಯ ಸ್ವರೂಪದ ಲೋಪಗಳು ಕಂಡುಬಂದಿವೆ ಎಂದು ತಿಳಿಸಿದೆ. ಈ ಲೋಪಗಳು ವಿಶೇಷವಾಗಿ ಭಾಷಾ ಅಲ್ಪಸಂಖ್ಯಾತ ಶಾಲೆಗಳು ಹಾಗೂ ಶಿಕ್ಷಕ ಹುದ್ದೆಗಳಿಗಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಘಟನೆ ಹೇಳಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿರುವ ಹಾಗೂ ಅರ್ಹವಾಗಿರುವ ಉರ್ದು ಮಾಧ್ಯಮ GPSTR ಮತ್ತು HSTR ಶಿಕ್ಷಕರ ಹುದ್ದೆಗಳನ್ನು ಸಂಪೂರ್ಣವಾಗಿ ಗುರುತಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗದಂತೆ ಖಾಲಿ ಹುದ್ದೆಗಳ ಸಮಗ್ರ ವಿವರಗಳನ್ನು ಸಂಗ್ರಹಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಸೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಉರ್ದು, ಮರಾಠಿ ಸೇರಿದಂತೆ ಸೂಕ್ತವಾಗಿ ಮಾನ್ಯತೆ ಪಡೆದ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು, ಭಾಷಾ ವೈವಿಧ್ಯ ಹೊಂದಿರುವ ಕರ್ನಾಟಕದಲ್ಲಿ ವಿವಿಧ ಭಾಷಾ ಮಾಧ್ಯಮಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಅಗತ್ಯ ಎಂದು ಅದು ಅಭಿಪ್ರಾಯಪಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿಭಾಗಗಳಲ್ಲಿ ಲಭ್ಯವಿರುವ ಹೈಸ್ಕೂಲ್ ಗಣಿತ ಶಿಕ್ಷಕರ ಖಾಲಿ ಹುದ್ದೆಗಳನ್ನೂ ನೇಮಕಾತಿ ಅಧಿಸೂಚನೆಯಲ್ಲಿ ಸೇರಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವಂತೆ ಇಲಾಖೆಯು ಎಲ್ಲಾ ವಿಷಯವಾರು ಖಾಲಿ ಹುದ್ದೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಕಟಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಹೇಳಿದೆ.
ಐದು ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆಗೆ ಬೇಡಿಕೆ:
2026ರ ನೇಮಕಾತಿಗೆ ಒಂದು ಬಾರಿಯ ವಿಶೇಷವಾಗಿ ಹೆಚ್ಚುವರಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂಬುದು ಸಂಘಟನೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಕೋವಿಡ್-19 ಹಾಗೂ ಕಳೆದ ಕೆಲವು ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದಿಂದಾಗಿ ವಯೋಮಿತಿ ದಾಟಿರುವ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವರ್ಷವಾದರೂ ಈ ವಿಶೇಷ ಸಡಿಲಿಕೆ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.
ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಈಗಾಗಲೇ ಸಲ್ಲಿಸಿರುವ ಆಕ್ಷೇಪಣೆಗಳು ಮತ್ತು ಮನವಿಗಳನ್ನು ಸರಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿತ್ತು. ಅದನ್ನು ಕೂಡಲೇ ಪರಿಶೀಲಿಸಿ ಪರಿಗಣಿಸಬೇಕು, ಅಗತ್ಯವಿರುವ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಆಗ್ರಹಿಸಿದೆ.
ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಧಿಸೂಚನೆ ಹಾಗೂ ಅಗತ್ಯವಿದ್ದಲ್ಲಿ ಪೂರಕ ಅಧಿಸೂಚನೆಗಳನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಹೊರಡಿಸಬೇಕು. ಸರಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ವಿಷಯವನ್ನು ತಂದು, ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಉರ್ದು ಮಾಧ್ಯಮ ಹುದ್ದೆಗಳ ಸೇರ್ಪಡೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಪ್ರಕಟನೆ, ಪರೀಕ್ಷೆಯ ಭಾಷಾ ಆಯ್ಕೆ, ಐದು ವರ್ಷಗಳ ವಯೋಮಿತಿ ಸಡಿಲಿಕೆ ಸೇರಿದಂತೆ ಎಲ್ಲ ಬಾಕಿ ಬೇಡಿಕೆಗಳನ್ನು ಸರಕಾರ ತುರ್ತಾಗಿ ಪರಿಗಣಿಸಿ, ರಾಜ್ಯದ ಸಾವಿರಾರು ಶಿಕ್ಷಕ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ನಸೀಂ ಅಹ್ಮದ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.