ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ; ಬಿಜೆಪಿ, ಸಂಘಪರಿವಾರದ ಅಸ್ಪಶ್ಯತೆಗೆ ಸಾಕ್ಷಿ : ರಮೇಶ್‌ಬಾಬು

Update: 2026-08-14 00:37 IST

ಬೆಂಗಳೂರು : ‘ಹಲದ್ವಾನಿ (ಉತ್ತರಾಖಂಡ) ಯಲ್ಲಿ ನಡೆದ ಘಟನೆ ಬಿಜೆಪಿ, ಆರೆಸ್ಸೆಸ್ ಸಿದ್ಧಾಂತದ ಹಿಂದುಳಿದ ಹಾಗೂ ದಲಿತರ ವಿಭಜಕ ಮನೋಭಾವವನ್ನು ಬಹಿರಂಗಪಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಹಲದ್ವಾನಿ ರಾಮಲೀಲಾ ಮೈದಾನದಲ್ಲಿ ನಡೆಸಲಾದ ‘ಶುದ್ಧೀಕರಣ’ ಕಾರ್ಯವು ಕಳವಳಕಾರಿ ಹಾಗೂ ಖಂಡನೀಯ. ಈ ಘಟನೆ ಖರ್ಗೆಯವರ ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರ ಅನುಸರಿಸುತ್ತಿರುವ ಪ್ರತೀಕಾರ ಮತ್ತು ದ್ವೇಷದ ರಾಜಕೀಯಕ್ಕೆ ಸಾಕ್ಷಿ’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ಗುರುವಾರ ಪ್ರಕಟಣೆ ನೀಡಿರುವ ಅವರು, ‘ಆ.8ರಂದು ಹಲದ್ವಾನಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆ ನಡೆಸಲಾಗಿತ್ತು. ನಂತರ ಅದೇ ಸ್ಥಳದಲ್ಲಿ ಬಿಜೆಪಿ, ಸಂಘಪರಿವಾರದ ಒಂದು ಸಂಘಟನೆಯಿಂದ ‘ಶುದ್ಧೀಕರಣ’ ಹವನ ನಡೆಸಲಾಗಿದೆ. ಈ ವಿಷಯವನ್ನು ಖರ್ಗೆಯವರೇ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, ಇಂತಹ ಕೃತ್ಯದ ಅತ್ಯಂತ ಆಕ್ಷೇಪಾರ್ಹ ಹಾಗೂ ಅವಮಾನಕಾರಿ ಎಂದು ಎತ್ತಿ ತೋರಿಸಿದ್ದಾರೆ. ಇದೀಗ ಬಿಜೆಪಿ ನಾಯಕರೂ ವಿಷಯದ ಬಗ್ಗೆ ತನಿಖೆ ನಡೆಸಬೇಕು’ ಎಂದು ಹೇಳಿದ್ದಾರೆ.

ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಹಾಗೂ ದೇಶದ ಅತ್ಯಂತ ಹಿರಿಯ ನಾಯಕರು ಮತ್ತು ಸಂಸದೀಯ ಪಟು. ಮುಖ್ಯವಾಗಿ ಅವರು ಐತಿಹಾಸಿಕವಾಗಿ ಶೋಷಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಲವು ದಶಕಗಳಿಂದ ಹೋರಾಡುತ್ತಿದ್ದಾರೆ. ಖರ್ಗೆ ಅವರು ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರಣಕ್ಕಾಗಿ ಆ ಸ್ಥಳದಲ್ಲಿ ‘ಶುದ್ಧೀಕರಣ’ ನಡೆಸಲಾಗಿದೆ. ಅದು ಸಾಮಾಜಿಕ ಬಹಿಷ್ಕಾರ ಮತ್ತು ಜಾತಿ ಪೂರ್ವಾಗ್ರಹದ ಆತಂಕಕಾರಿ ಸಂದೇಶವನ್ನು ನೀಡುತ್ತದೆ. ಆಧುನಿಕ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಯಾರನ್ನೂ ಅವರ ಜಾತಿ, ಜನ್ಮ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ‘ಅಶುದ್ಧ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಹಿಂದೂ ಧರ್ಮ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಜಾತಿ ತಾರತಮ್ಯ ಅಥವಾ ಅಸ್ಪಶ್ಯತೆಯೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ದೃಢ ನಿಲುವಾಗಿದೆ. ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆ ಮತ್ತು ದಲಿತರ ಶೋಷಣೆಗೆ ಸಂವಿಧಾನ ರೂಪಿತವಾದ ಭಾರತದಲ್ಲಿ ಯಾವುದೇ ಸ್ಥಾನವಿಲ್ಲ. ಹಲದ್ವಾನಿ ಘಟನೆ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂಬುದನ್ನು ಸೂಚಿಸುತ್ತದೆೆ.

-ರಮೇಶ್‌ಬಾಬು, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News