ಬನಾರಸ್ ಲೋಕೋಮೋಟಿವ್ ವರ್ಕ್ಸ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ
ಹೊಸದಿಲ್ಲಿ : ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇಂದು (ಜ.24) ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್ಡಬ್ಲ್ಯು)ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬಿಎಲ್ಡಬ್ಲ್ಯುನ ನಾವಿನ್ಯತೆಗಳು, ರೈಲ್ವೆ ಎಂಜಿನ್ (ಚಲನಶೀಲ) ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಸಚಿವ ವಿ.ಸೋಮಣ್ಣ ಶ್ಲಾಘಿಸಿದರು.
ವರ್ಕ್ ಶಾಪ್ ವೀಕ್ಷಣೆ ವೇಳೆ ಸಚಿವರು, ಹೊಸ ಲೋಕೋ ಫ್ರೇಮ್ ಶಾಪ್, ಲೋಕೋ ಅಸೆಂಬ್ಲಿ ಶಾಪ್, ಟ್ರಾಕ್ಷನ್ ಅಸೆಂಬ್ಲಿ ಶಾಪ್, ಟ್ರಕ್ ಮಷೀನ್ ಶಾಪ್ ಮತ್ತು ಲೋಕೋ ಟೆಸ್ಟ್ ಶಾಪ್ ಅನ್ನು ಪರಿಶೀಲಿಸಿದರು.
ಬಳಿಕ, ಪ್ರಧಾನ ವ್ಯವಸ್ಥಾಪಕ ನರೇಶ್ ಪಾಲ್ ಸಿಂಗ್ ಅವರು ಆಡಳಿತ ಕಟ್ಟಡದಲ್ಲಿರುವ ಹಾಲ್ ಆಫ್ ಫೇಮ್ನಲ್ಲಿ ನಡೆದ ಸಭೆಯಲ್ಲಿ ಸಸಿಯೊಂದಿಗೆ ಸಚಿವ ವಿ.ಸೋಮ್ಣ ಅವರನ್ನು ಸ್ವಾಗತಿಸಿದರು. ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಸುಶೀಲ್ ಕುಮಾರ್ ಶ್ರೀವಾಸ್ತವ ಅವರು ಬಿಎಲ್ಡಬ್ಲ್ಯುನ ಐತಿಹಾಸಿಕ ಸಾಧನೆಗಳು, ತಾಂತ್ರಿಕ ಪರಿಣತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸಿದರು.
ನಂತರ ಮಾತನಾಡಿದ ಸಚಿವ ವಿ.ಸೋಮಣ್ಣ ಅವರು, “ಬಿಎಲ್ಡಬ್ಲ್ಯುನ ಉತ್ಪಾದನಾ ವ್ಯವಸ್ಥೆಯು ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ. ಬಿಎಲ್ಡಬ್ಲ್ಯು ಆತ್ಮನಿರ್ಭರ ಭಾರತ ಅಭಿಯಾನದ ಪ್ರಮುಖ ಆಧಾರಸ್ತಂಭವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬದ್ಧತೆ ಮತ್ತು ಪರಿಶ್ರಮ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಡುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಬಿಎಲ್ಡಬ್ಲ್ಯು ಭಾರತೀಯ ರೈಲ್ವೆಯ ಪ್ರಮುಖ ಎಂಜಿನ್ ಉತ್ಪಾದನಾ ಘಟಕವಾಗಿದ್ದು, ಇಲ್ಲಿಯವರೆಗೆ 10,500 ಎಂಜಿನ್ ಗಳನ್ನು ತಯಾರಿಸಲಾಗಿದ್ದು, ಭಾರತೀಯ ರೈಲ್ವೆಯನ್ನು ಶ್ರೇಷ್ಠತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗಿದೆ" ಎಂದು ಪ್ರಧಾನ ವ್ಯವಸ್ಥಾಪಕರಾದ ನರೇಶ್ ಪಾಲ್ ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಇಲಾಖಾ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.