ಮೊಟ್ಟೆಯ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್
Update: 2025-12-18 16:29 IST
PC : freepik/ದಿನೇಶ್ ಗುಂಡೂರಾವ್
ಬೆಳಗಾವಿ : ‘ಕೋಳಿಮೊಟ್ಟೆ ತಿನ್ನುವುದರ ಬಗ್ಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ಕುಮಾರ್ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಳೆದ ವರ್ಷ ಕೋಳಿಮೊಟ್ಟೆ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ 147 ಮೊಟ್ಟೆ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಆಪೈಕಿ ಒಂದು ಮಾದರಿಯನ್ನು ಹೊರತುಪಡಿಸಿ ಉಳಿದೆಲ್ಲ ಮಾದರಿಗಳು ಗುಣಮಟ್ಟದಿಂದ ಕೂಡಿದ್ದವು ಎಂದು ಸ್ಪಷ್ಟಣೆ ನೀಡಿದರು.
ಕೋಳಿಮೊಟ್ಟೆಯ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮೊಟ್ಟೆಯನ್ನು ಎಲ್ಲ ಶಾಲಾ ಮಕ್ಕಳಿಗೆ ಕೊಡಬಹುದು, ತಿನ್ನಬಹುದು, ಕೋಳಿಮೊಟ್ಟೆ ಆರೋಗ್ಯಕರ, ಪೌಷ್ಟಿಕಾಂಶವುಳ್ಳದ್ದಾಗಿದ್ದು, ಎಲ್ಲರೂ ತಿನ್ನಬಹುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.