ಸಂಡೂರು : ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜೋಳದ ಬೆಳೆಗೆ ಕ್ಯಾಟರ್‌ಪಿಲ್ಲರ್‌ (Helicoverpa species) ಕೀಟದ ಬಾಧೆ ಕಾಣಿಸಿಕೊಂಡಿದ್ದು, ರೈತರು ಕೂಡಲೇ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆ ಸೂಚಿಸಿದೆ.

ಅಗ್ರಹಾರ, ಕಾಳಿಂಗೇರಿ, ಸೋವೇನಹಳ್ಳಿ, ಬೊಮ್ಮಘಟ್ಟ, ಹಿರೆಕೆರೆಯಾಗಿನಹಳ್ಳಿ, ಬಂಡ್ರಿ ಹಾಗೂ ನಿಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೋಳದ ಬೆಳೆಗೆ ಕೀಟ ಬಾಧೆ ಕಂಡುಬಂದಿರುವ ಕುರಿತು ರೈತರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಆಗಸ್ಟ್ 27 ಮತ್ತು 28ರಂದು ವಿವಿಧ ಗ್ರಾಮಗಳಲ್ಲಿ ಬೆಳೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೋಳದ ಬೆಳೆಯಲ್ಲಿ ಟಸಾಕ್ ಕ್ಯಾಟರ್‌ಪಿಲ್ಲರ್ ಕೀಟದ ಹಾವಳಿ ಕಂಡುಬಂದಿದೆ ಎಂದು ಉಪ ಕೃಷಿ ನಿರ್ದೇಶಕ ಮಹಮ್ಮದ್ ರಫಿಉಲ್ಲಾ ರಝ್ವಿ ತಿಳಿಸಿದ್ದಾರೆ.

ಈ ಕೀಟವು ಮುಖ್ಯವಾಗಿ ರಾತ್ರಿ ವೇಳೆಯಲ್ಲಿ ಬೆಳೆಯ ಮೇಲೆ ಕಾಣಿಸಿಕೊಂಡು ಜೋಳದ ತೆನೆ ಭಾಗದಲ್ಲಿರುವ ಕಾಳುಗಳನ್ನು ತಿಂದು ಹಾನಿ ಮಾಡುತ್ತದೆ. ಇದರಿಂದ ಬೆಳೆಯ ಇಳುವರಿ ಕುಂಠಿತವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.

ಕೀಟ ಬಾಧೆಗೆ ಕಾರಣವೇನು?

ನೈಸರ್ಗಿಕವಾಗಿ ಕೀಟಗಳನ್ನು ನಿಯಂತ್ರಿಸುವ ಭಕ್ಷಕ ಕೀಟಗಳ ಸಂಖ್ಯೆ ಕಡಿಮೆಯಾಗಿರುವುದು, ಒಣಹವೆಯಿಂದ ಉಷ್ಣಾಂಶ ಹೆಚ್ಚಾಗಿರುವುದು, ಮೊಟ್ಟೆ ಹಾಗೂ ಕೀಟಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿರುವುದು ಹಾಗೂ ಗಾಳಿಯ ವೇಗದಿಂದ ಕೀಟಗಳ ಮೊಟ್ಟೆ ಮತ್ತು ಹುಳುಗಳು ಹರಡುವ ಸಾಧ್ಯತೆ ಹೆಚ್ಚಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಕೀಟದ ಜೀವನಚಕ್ರವು ನಿರ್ದಿಷ್ಟ ಅವಧಿಗಳಲ್ಲಿ ಪುನರಾವರ್ತನೆಯಾಗುವ ಕಾರಣ, ಹಾನಿ ಕಂಡುಬಂದಿರುವ ಪ್ರದೇಶಗಳಲ್ಲಿ ತಕ್ಷಣವೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ರೈತರಿಗೆ ಸಲಹೆ ನೀಡಿದೆ.

ನಿಯಂತ್ರಣಕ್ಕೆ ಇಲಾಖೆಯ ಸಲಹೆ

ಜೋಳದ ಬೆಳೆಯಲ್ಲಿ ಕೀಟ ಬಾಧೆ ಕಂಡುಬಂದಿರುವ ರೈತರು ಕೃಷಿ ಇಲಾಖೆಯ ತಾಂತ್ರಿಕ ಸಲಹೆಯಂತೆ ಶಿಫಾರಸು ಮಾಡಲಾದ ಕೀಟನಾಶಕಗಳನ್ನು ಬಳಸುವಂತೆ ಸೂಚಿಸಲಾಗಿದೆ. ಇಮಾಮೆಕ್ಟಿನ್ ಬೆಂಜೋಯೇಟ್, ಸೈನೋಸ್ಯಾಡ್, ಕ್ಲೋರಾಂಟ್ರಾನಿಲಿಪ್ರೋಲ್‌ (ಕೋರಾಜೆನ್) ಸೇರಿದಂತೆ ಇಲಾಖೆಯಿಂದ ಸೂಚಿಸಲಾದ ಕೀಟನಾಶಕಗಳನ್ನು ನಿಗದಿತ ಪ್ರಮಾಣದಲ್ಲಿ ಸಿಂಪಡಿಸುವಂತೆ ತಿಳಿಸಲಾಗಿದೆ.

ಎಲೆಗಳ ಮೇಲೆ ಕೀಟ ಬಾಧೆ ಕಂಡುಬಂದಲ್ಲಿ ಇಲಾಖೆಯ ಶಿಫಾರಸಿನಂತೆ ಸೂಕ್ತ ಪುಡಿ ಔಷಧಿಗಳನ್ನು ದೂಳೀಕರಿಸುವ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

ರೈತರಿಗೆ ಅಗತ್ಯವಿರುವ ಔಷಧಿಗಳು ಹಾಗೂ ಔಷಧಿ ಸಿಂಪರಣಾ ಉಪಕರಣಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಮಹಮ್ಮದ್ ರಫಿಉಲ್ಲಾ ರಝ್ವಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor