Ballari | 6ರಿಂದ 8ನೇ ತರಗತಿ ಗಣಿತ, ವಿಜ್ಞಾನ ಶಿಕ್ಷಕರಿಗೆ 5 ದಿನಗಳ ತರಬೇತಿ
ಸಂಡೂರು/ಬಳ್ಳಾರಿ: 2026-27ನೇ ಸಾಲಿನಿಂದ 6ರಿಂದ 8ನೇ ತರಗತಿಯ ಗಣಿತ ಹಾಗೂ ವಿಜ್ಞಾನ ವಿಷಯಗಳ ಪಠ್ಯಕ್ರಮದಲ್ಲಿ ಅಳವಡಿಸಿರುವ ಹೊಸ ಬೋಧನಾ ವಿಧಾನಗಳು ಮತ್ತು ಬದಲಾದ ಅಂಶಗಳ ಕುರಿತು ಶಿಕ್ಷಕರಿಗೆ ಐದು ದಿನಗಳ ವಿಷಯ ಸಂಪದೀಕರಣ ತರಬೇತಿ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬಳ್ಳಾರಿ ಹಾಗೂ ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಆ.19ರಿಂದ 24ರವರೆಗೆ ಸಂಡೂರು ತಾಲ್ಲೂಕಿನ TLC ಕೇಂದ್ರ ಹಾಗೂ ಚೋರನೂರು ಹೋಬಳಿಯ GLPS ಆಶ್ರಯ ಶಾಲೆಯಲ್ಲಿ ತರಬೇತಿ ಆಯೋಜಿಸಲಾಗಿತ್ತು.
NCERT ಪಠ್ಯಕ್ರಮದ ರಾಷ್ಟ್ರೀಯ ಅಭಿವೃದ್ಧಿ ಗುರಿಗಳ ಆಶಯಗಳನ್ನು ಒಳಗೊಂಡಿರುವ ನೂತನ ಪಠ್ಯಪುಸ್ತಕಗಳಲ್ಲಿ ಮಕ್ಕಳಲ್ಲಿ 21ನೇ ಶತಮಾನದ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಚಟುವಟಿಕೆ ಆಧಾರಿತ, ಅನ್ವೇಷಣಾತ್ಮಕ ಹಾಗೂ ಅನುಭವಾಧಾರಿತ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
‘ಏನು?, ಏಕೆ?, ಹೇಗೆ?’ ಎಂಬ ಪ್ರಶ್ನೆಗಳ ಮೂಲಕ ಮಕ್ಕಳಲ್ಲಿ ಕುತೂಹಲ ಬೆಳೆಸುವುದು, ನಿತ್ಯಜೀವನದ ಅನುಭವಗಳೊಂದಿಗೆ ವಿಷಯಗಳನ್ನು ಹೋಲಿಸಿ ಕಲಿಯುವಂತೆ ಮಾಡುವುದು ಹಾಗೂ ಕಲಿಕೆಯನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಅವಕಾಶ ಕಲ್ಪಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿತ್ತು.
ಎರಡು ತರಬೇತಿ ಕೇಂದ್ರಗಳಲ್ಲಿ ಒಟ್ಟು 81 ಶಿಕ್ಷಕರು ಭಾಗವಹಿಸಿದ್ದು, ಪಠ್ಯಪುಸ್ತಕ ವಿಶ್ಲೇಷಣೆ, ಬದಲಾದ ಕಲಿಕಾ ವಿಧಾನಗಳು, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ತರಗತಿ ಬೋಧನೆಯಲ್ಲಿ ಅವುಗಳ ಅನ್ವಯದ ಕುರಿತು ಮಾರ್ಗದರ್ಶನ ನೀಡಲಾಯಿತು.
APF ತಂಡದ ಸಹಕಾರದೊಂದಿಗೆ ECO ಗೂಳೆಪ್ಪ ಬೆಳ್ಳಕಟ್ಟೆ, BRP ಮಂಜುನಾಥ್ ಆದಿಮನೆ, CRP ನಾಗರಾಜ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ತರಬೇತಿಯ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ, ಅನ್ವೇಷಣಾ ಪ್ರವೃತ್ತಿ ಹಾಗೂ ಅನ್ವಯಿಕ ಕಲಿಕೆಯನ್ನು ಬೆಳೆಸಲು ಶಿಕ್ಷಕರಿಗೆ ಅಗತ್ಯವಾದ ಬೋಧನಾ ತಂತ್ರಗಳನ್ನು ಪರಿಚಯಿಸಲಾಯಿತು. ಹೊಸ ಪಠ್ಯಕ್ರಮದ ಆಶಯಗಳನ್ನು ತರಗತಿ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತರಬೇತಿ ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದರು.