×
Ad

Ballari | ಅರ್ಥ ಸಂಭ್ರಮ–2026: ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Update: 2026-07-02 19:28 IST

ಸಂಡೂರು/ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ “ಅರ್ಥ ಸಂಭ್ರಮ–2026” ಹೆಸರಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು 2024–26ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಡಾ. ಸುಮಾ ಕೆ.ಜಿ., ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮ, ಶಿಸ್ತು ಹಾಗೂ ನಿರಂತರ ಕಲಿಕೆ ಅತ್ಯಗತ್ಯವಾಗಿದ್ದು, ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು.

ಮುಖ್ಯ ಅತಿಥಿ ಡಾ. ಮಂಜುನಾಥ ಉಲವತ್ತಿ ಶೆಟ್ಟರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಡಾ. ಸೋಮಶೇಖರ್ ಅವರು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪನ್ಯಾಸಕ ಡಾ. ಕೃಷ್ಣ ಅವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಉಪಯೋಗಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಪಾತ್ರವನ್ನು ವಿವರಿಸಿದರು.

ಕೇಂದ್ರದ ನಿರ್ದೇಶಕ ಪ್ರೊ. ತಿಪ್ಪೇಸ್ವಾಮಿ ಹೆಚ್. ಮಾತನಾಡಿ, ಪದವಿಗಿಂತ ಮೌಲ್ಯಾಧಾರಿತ ಜೀವನ ಮುಖ್ಯವಾಗಿದ್ದು, ಉತ್ತಮ ಶಿಕ್ಷಣದೊಂದಿಗೆ ಮಾನವೀಯತೆ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಿಭಾಗದ ಅಧ್ಯಾಪಕ ಡಾ. ನಾಗರಾಜ ಜೆ. ಅವರು ತಾಳ್ಮೆ, ಶಿಸ್ತು ಮತ್ತು ಪರಿಶ್ರಮದ ಮಹತ್ವವನ್ನು ವಿವರಿಸಿ, ತಂದೆ-ತಾಯಿಗಳಿಗೆ ಗೌರವ ನೀಡಿ ಉತ್ತಮ ನಾಗರಿಕರಾಗಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕ ಡಾ. ಚೌಡಪ್ಪ ವಿ.ಎ. ಅವರು ಅರ್ಥಶಾಸ್ತ್ರ ವಿಭಾಗದ ಬೆಳವಣಿಗೆ, ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ, ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಹೊಸ ಜ್ಞಾನವನ್ನು ಸದಾ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅನುಭವಗಳು ಹಾಗೂ ನೆನಪುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ನಾಗರಾಜ ಜಿ., ಸ್ವಾಗತವನ್ನು ಸುದರ್ಶನ ಎಸ್. ಹಾಗೂ ವಂದನಾರ್ಪಣೆಯನ್ನು ಮಲ್ಲಿಕಾರ್ಜುನ ನೆರವೇರಿಸಿದರು.

ಸಂಶೋಧನಾ ವಿದ್ಯಾರ್ಥಿಗಳು, ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News