ಬಳ್ಳಾರಿ/ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದ ಮುಸ್ಲಿಂ ಸಮಾಜದ ಖಬರುಸ್ತಾನ್ (ಸ್ಮಶಾನ) ಸ್ಥಳಕ್ಕೆ ಶಾಸಕ ಜೆ.ಎನ್. ಗಣೇಶ್ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುವ ಮುಖಂಡ ಹಾಗೂ ಕಂಪ್ಲಿ ತಾಲೂಕು ಮಾನವ ಬಂಧುತ್ವ ಅಧ್ಯಕ್ಷ ಬಿ.ನಬೀಸಾಬ್ ಅವರು, ಖಬರುಸ್ತಾನ್‌ಗೆ ತೆರಳಲು ಸಮರ್ಪಕ ರಸ್ತೆ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ಕಿರಿದಾದ ರಸ್ತೆಯಲ್ಲಿ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಿರಿದಾದ ಮಣ್ಣಿನ ದಾರಿ, ಎರಡೂ ಬದಿಯ ಹಸಿರು ಭತ್ತದ ಗದ್ದೆಗಳು ಹಾಗೂ ದಾರಿಯ ಕೊನೆಯಲ್ಲಿ ಅರ್ಧ ನಿರ್ಮಾಣಗೊಂಡ ಕಾಂಪೌಂಡ್ ಗೋಡೆಯಿರುವ ಖಬರುಸ್ತಾನ್‌ನ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಮನುಷ್ಯನ ಅಂತಿಮ ಶವಯಾತ್ರೆಯನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಕರ್ತವ್ಯ. ಇದು ಭಾವನಾತ್ಮಕ ಹಾಗೂ ಮಾನವೀಯತೆಯ ಪ್ರತೀಕವಾಗಿದೆ. ಇಲ್ಲಿನ ಖಬರುಸ್ತಾನ್ (ಸ್ಮಶಾನ)ವನ್ನು ಅಭಿವೃದ್ಧಿಪಡಿಸುವ ಜೊತೆಗೆ ಕಿರಿದಾದ ರಸ್ತೆಯನ್ನು ಅಗಲೀಕರಣಗೊಳಿಸಿ, ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ಶವಯಾತ್ರೆಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಮುಸ್ಲಿಂ ಸಮಾಜದ ಏಳಿಗೆಯ ಜೊತೆಗೆ ಪ್ರತಿಯೊಂದು ಹಂತದಲ್ಲೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಮುಖಂಡರಾದ ಪೇಂಟರ್ ಮಸ್ತಾನ್, ಸಿ.ಆರ್.ಹನುಮಂತ, ಕೆ.ಷಣ್ಮುಕಪ್ಪ, ಜಾಫರ್, ವರದಿ ಶಬ್ಬೀರ್, ಹೊನ್ನೂರವಲಿ, ಗೂಡುಸಾಬ್, ರಾಜಾಭಕ್ಷಿ, ಪೀರಸಾಬ್, ಲೋಕರಾಜ, ಶರಣಗೌಡ, ಖಾಜಾ ಹುಸೇನ್, ನೂರ್‌ಬಾಷಾ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor