ಸಂಡೂರು/ ಬಳ್ಳಾರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಶಿಕ್ಷಣದೊಂದಿಗೆ ಸಮನ್ವಯಗೊಳಿಸುವುದು ಅಗತ್ಯವಾಗಿದೆ. ಏಕರೂಪ ಶಿಕ್ಷಣಕ್ಕೆ ಡಿಜಿಟಲ್ ಸ್ಟುಡಿಯೊ ಬಹಳಷ್ಟು ಅನುಕೂಲವಾಗಲಿದ್ದು, ಇದರ ಮೂಲಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ. ತುಕಾರಾಂ ಹೇಳಿದರು.

ಪಟ್ಟಣದ ಗುರುನಾಥರಾವ್ ಪ್ರಾಚಾರ್ಯರ ಗುರುಭವನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಎನ್‌ಎಂಡಿಸಿ ಸಂಸ್ಥೆಯ ಸಿಎಸ್‌ಆರ್ ಅನುದಾನದ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಟ್ಯಾಬ್ ಸಂಡೂರು ಡಿಜಿಟಲ್ ಸ್ಟುಡಿಯೊ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲೇ ಪ್ರಥಮ ಬಾರಿಗೆ ಸಂಡೂರಿನಲ್ಲಿ ಡಿಜಿಟಲ್ ಸ್ಟುಡಿಯೊ ಸ್ಥಾಪಿಸಲಾಗಿದ್ದು, ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್ ಮೂಲಕ ನುರಿತ ವಿಷಯ ಶಿಕ್ಷಕರಿಂದ ಪಾಠ ಬೋಧನೆ ಮಾಡಿಸಲಾಗುವುದು. ಈ ಪಾಠಗಳು ಏಕಕಾಲದಲ್ಲಿ ವಿವಿಧ ಶಾಲೆಗಳಿಗೆ ಪ್ರಸಾರವಾಗುವ ಮೂಲಕ ವಿದ್ಯಾರ್ಥಿಗಳಿಗೆ ಒಂದೇ ಗುಣಮಟ್ಟದ ಬೋಧನೆ ದೊರೆಯಲಿದೆ. ಇದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಶೈಕ್ಷಣಿಕ ಫಲಿತಾಂಶವೂ ಸುಧಾರಿಸಲಿದೆ ಎಂದು ಶಾಸಕಿ ತಿಳಿಸಿದರು.

‘ಶಿಕ್ಷಕ ಮೊದಲು ವಿದ್ಯಾರ್ಥಿಯಾಗಬೇಕು’

ಶಿಕ್ಷಕರು ತಮ್ಮ ಬೋಧನಾ ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಕ ತಾನೇ ಮೊದಲು ವಿದ್ಯಾರ್ಥಿಯಾಗಿ ಕಲಿತುಕೊಂಡ ಬಳಿಕ ಮಕ್ಕಳಿಗೆ ಪಾಠ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಲು ಸಾಧ್ಯವಾಗುತ್ತದೆ ಎಂದು ಅನ್ನಪೂರ್ಣ ತುಕಾರಾಂ ಹೇಳಿದರು.

ಮಕ್ಕಳನ್ನು ಸಮಾಜದ ದೊಡ್ಡ ಆಸ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ಸಹಯೋಗದೊಂದಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಮಾಜವನ್ನು ತಿದ್ದುವ ಶಕ್ತಿ ಶಿಕ್ಷಕರಲ್ಲಿದ್ದು, ಅವರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವತ್ತ ಹೆಚ್ಚಿನ ಗಮನಹರಿಸಬೇಕು. ತಂದೆ-ತಾಯಿಯರ ಸಂಸ್ಕಾರ, ಗುರು-ಹಿರಿಯರಿಗೆ ಗೌರವ ನೀಡುವ ಗುಣ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ತಂತ್ರಜ್ಞಾನಾಧಾರಿತ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಡಿಜಿಟಲ್ ಸ್ಟುಡಿಯೊ ಕೇವಲ ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿಲ್ಲ. ಅನುದಾನ ರಹಿತ ಶಾಲೆಗಳೂ ಇದರ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಸಂಡೂರು ಡಿಜಿಟಲ್ ಶಿಕ್ಷಣದ ಮಾದರಿ: ಬಿಇಒ

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಮಾತನಾಡಿ, 2018ರಲ್ಲಿ ಶೇ.40ರಷ್ಟು ಶಿಕ್ಷಕರ ಕೊರತೆ ಎದುರಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮಕ್ಕಳು ಮನೆಗಳಲ್ಲಿದ್ದರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ವಿವಿಧ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಿತು. ಇದೀಗ ತಂತ್ರಜ್ಞಾನವನ್ನು ಬಳಸಿಕೊಂಡು ರೂಪಿಸಿರುವ ಡಿಜಿಟಲ್ ಸ್ಟುಡಿಯೊ ಸಂಡೂರನ್ನು ರಾಜ್ಯದ ಡಿಜಿಟಲ್ ಶಿಕ್ಷಣದ ಮಾದರಿಯನ್ನಾಗಿ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್‌ಎಂಡಿಸಿ ಸಂಸ್ಥೆಯ ಅಧಿಕಾರಿಗಳಾದ ಪಿ. ರಾಮಯ್ಯ, ಚಟರ್ಜಿ, ವಸಂತನ್, ವೇದವಂತ ಕುಮಾರ್, ಎಸ್.ಕೆ. ಪಾಟೀಲ್, ಎಸ್.ಪಿ. ಪೊಂಪಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಣ್ಣ ಯಳವಾರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಶಿಧರ್, ಶಿಕ್ಷಣ ಸಂಯೋಜಕ ಶರಣಬಸಪ್ಪ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor