ಬಳ್ಳಾರಿ | ಸಮಾಜದಲ್ಲಿ ಸಮಾನತೆ ಮೂಡಿಸಲು ಮಹನೀಯರ ತತ್ವಗಳು ದಾರಿದೀಪ : ಪಿ.ಗಾದೆಪ್ಪ
ಬಳ್ಳಾರಿ : ಮಹನೀಯರ ಆದರ್ಶ ಬದುಕು ಮತ್ತು ಅವರ ತತ್ವಗಳನ್ನು ಇಂದಿನ ಯುವಜನತೆಗೆ ತಲುಪಿಸುವ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸೌಹಾರ್ದತೆ ಮೂಡಿಸಲು ರಾಜ್ಯ ಸರ್ಕಾರವು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ 'ಮಹಾಯೋಗಿ ವೇಮನ ಜಯಂತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹನೀಯರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ಕನ್ನಡಕ್ಕೆ ಸರ್ವಜ್ಞ ಹಾಗೂ ತಮಿಳಿಗೆ ತಿರುವಳ್ಳುವರ್ ಅವರಂತೆ ತೆಲುಗು ಸಾಹಿತ್ಯಕ್ಕೆ ಮಹಾಯೋಗಿ ವೇಮನರು ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಜಾತೀಯತೆ, ಅಂಧಶ್ರದ್ಧೆ ಮತ್ತು ಮೇಲು-ಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದ ಅವರು ಲೋಕಕ್ಕೆ ಮಾರ್ಗದರ್ಶಿಯಾಗಿದ್ದರು ಎಂದರು.
ಮಲಪನಗುಡಿ ಸರ್ಕಾರಿ ಶಾಲೆಯ ಮುಖ್ಯಗುರುಗಳಾದ ಶೇಖರ ಗಿರಡ್ಡಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ನಿಹಾರಿಕಾ ಅವರಿಂದ ಭರತನಾಟ್ಯ ಹಾಗೂ ಹಿಮಬಿಂದು ಅವರಿಂದ ಗಾಂಧಾರಿ ಕಲೆ ಪ್ರದರ್ಶನಗೊಂಡು ಜನರ ಮೆಚ್ಚುಗೆ ಗಳಿಸಿದವು. ದೊಡ್ಡಬಸಪ್ಪ ಗವಾಯಿ ತಂಡದವರಿಂದ ಭಕ್ತಿ ಸಂಗೀತ ಹಾಗೂ ವೇಮನ ಪದ್ಯಗಳ ಗಾಯನ ಜರುಗಿತು.
ಜಯಂತಿಯ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ರೆಡ್ಡಿ ಜನ ಸಂಘದ ಆವರಣದಿಂದ ಆರಂಭವಾದ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಹಳೆಯ ಡಿಸಿ ಕಚೇರಿ ರಸ್ತೆ ಹಾಗೂ ಗವಿಯಪ್ಪ ವೃತ್ತದ ಮೂಲಕ ಸಾಗಿ ರಂಗಮಂದಿರವನ್ನು ತಲುಪಿತು.
ಈ ಸಂದರ್ಭದಲ್ಲಿ ರೆಡ್ಡಿ ಜನ ಸಂಘದ ಜಿಲ್ಲಾಧ್ಯಕ್ಷ ಎನ್. ಪ್ರತಾಪ್ ರೆಡ್ಡಿ, ತಹಶೀಲ್ದಾರ್ ಶಾಷಾವಲಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸೇರಿದಂತೆ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.