Bidar | ಭಗವಂತ್ ಖೂಬಾ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ಬೀದರ್ : ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಅವರು, ಸತ್ಯಾದೇವಿ ಮಾತಾಜಿ ಹಾಗೂ ಜಿಲ್ಲಾಧಿಕಾರಿ ನಡುವಿನ ಫೋನ್ ಸಂಭಾಷಣೆಯನ್ನು ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿರುವ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟವು ಖೂಬಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.
ಭಗವಂತ್ ಖೂಬಾ ಅವರು ಬಸವ ಧರ್ಮದ ಪೀಠದ ಸತ್ಯಾದೇವಿ ಮಾತಾಜಿ ಅವರಿಗೆ ಕರೆ ಮಾಡಿ ಎಸ್ಐಆರ್ ಕಾರ್ಯಕ್ರಮಕ್ಕೆ ಏಕೆ ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದು ಕಾಂಗ್ರೆಸ್ ಕಾರ್ಯಕ್ರಮ. ನಿಮಗೆ ತಿಳುವಳಿಕೆ ಇಲ್ಲ. ನಾನು ತಿಳಿಸಿ ಹೇಳುತ್ತೇನೆ ಎಂದು ಪೂಜ್ಯರಿಗೆ ಕನಿಷ್ಠ ಮಾತುಗಳು ಆಡಿ ಅಗೌರವ ತೋರಿಸಿದ್ದು ಖಂಡನೀಯ. ಮಾತಾಜಿ ಅವರಿಗೆ ತಿಳುವಳಿಕೆ ಇಲ್ಲ ಎಂದು ನೇರವಾಗಿ ಮಾನಹಾನಿ ಮಾಡಿದ್ದಲ್ಲದೆ, ಮಾತಾಜಿ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿರುವುದು ಖಂಡನೀಯ. ಆದ್ದರಿಂದ ಭಗವಂತ್ ಖೂಬಾ ವಿರುದ್ಧ ಕಾನೂನು ಬದ್ಧ ಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.