Bidar | ಪಾರ್ಥೇನಿಯಂ ನಿಯಂತ್ರಣಕ್ಕೆ ರೈತರು, ಸಾರ್ವಜನಿಕರು ಮುಂದಾಗಿ : ಡಾ.ಎಸ್.ವಿ.ಪಾಟೀಲ್

‘21ನೇ ಪಾರ್ಥೇನಿಯಂ ಜಾಗೃತಿ ಸಪ್ತಾಹ’ ಕಾರ್ಯಕ್ರಮ

Update: 2026-08-19 19:01 IST

ಬೀದರ್: ಒಂದು ಪಾರ್ಥೇನಿಯಂ ಸಸ್ಯವು ಸುಮಾರು 5 ಸಾವಿರದಿಂದ 25 ಸಾವಿರ ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಗಾಳಿ, ನೀರು ಹಾಗೂ ಮಾನವ ಚಟುವಟಿಕೆಗಳಿಂದ ವೇಗವಾಗಿ ಹರಡುತ್ತದೆ. ಇದರಿಂದ ಕೃಷಿ ಭೂಮಿಯ ಫಲವತ್ತತೆ ಹಾಗೂ ಬೆಳೆಗಳ ಬೆಳವಣಿಗೆಗೆ ಹಾನಿಯಾಗುವುದರ ಜತೆಗೆ, ಮಾನವರಲ್ಲಿ ಚರ್ಮದ ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ರೈತರು ಹಾಗೂ ಸಾರ್ವಜನಿಕರು ಸೂಕ್ತ ಸಮಯದಲ್ಲಿ ಪಾರ್ಥೇನಿಯಂ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ್ ಕರೆ ನೀಡಿದರು.

ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ–1 ಮತ್ತು 2ರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘21ನೇ ಪಾರ್ಥೇನಿಯಂ ಜಾಗೃತಿ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1950ರಲ್ಲಿ ಅಮೆರಿಕದಿಂದ ಪಿಎಲ್–480 ಯೋಜನೆಯಡಿ ಗೋಧಿ ಆಮದು ಮಾಡಿಕೊಂಡ ಸಂದರ್ಭದಲ್ಲಿ ಪಾರ್ಥೇನಿಯಂ ಸಸ್ಯ ಭಾರತಕ್ಕೆ ಪ್ರವೇಶಿಸಿತು. 1955–56ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಕಾಣಿಸಿಕೊಂಡ ಈ ಕಳೆ ಇದೀಗ ದೇಶದ ವಿವಿಧೆಡೆ ವ್ಯಾಪಕವಾಗಿ ಹರಡಿದೆ. ಇದರ ನಿಯಂತ್ರಣಕ್ಕೆ ನಿರಂತರ ಕ್ರಮ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ವಿಜಯ್ ಮಹಾಂತೇಶ್ ಅವರು ಪಾರ್ಥೇನಿಯಂ ನಿಯಂತ್ರಣದ ವಿವಿಧ ವಿಧಾನಗಳು ಹಾಗೂ ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.

ಶ್ರಮದಾನ :

ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಪಾರ್ಥೇನಿಯಂ ಕಳೆಯನ್ನು ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ತೆರವುಗೊಳಿಸಿದರು.

ಪ್ರಾಧ್ಯಾಪಕರಾದ ಡಾ. ಮುಹ್ಮದ್ ಫಾರೂಕ್, ಡಾ. ಅನುರಾಧಾ, ಡಾ. ಜಾನವಿ ಡಿ.ಆರ್., ಎನ್‌ಎಸ್‌ಎಸ್ ಅಧಿಕಾರಿ ಡಾ. ರಮೇಶ್ ನಾಯಕ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News