Bidar | ‘ಐ ಆಮ್ ಎ ಲೀಡರ್’ ಪುಸ್ತಕದ 2ನೇ ಆವೃತ್ತಿ ಬಿಡುಗಡೆ ಮಾಡಿದ ಸಂಸದ ಸಾಗರ್ ಖಂಡ್ರೆ
ಬೀದರ್: ಜನರೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ಔರಾದ್ ವಿಧಾನಸಭಾ ಕ್ಷೇತ್ರದ ಕರಂಜಿ (ಕೆ) ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಸಾಗರ್ ಖಂಡ್ರೆ ಅವರು, ಪತ್ರಕರ್ತ ಹಾಗೂ ಲೇಖಕ ಹಣಮಂತ್ ದೇಶಮುಖ್ ರಚಿಸಿರುವ ‘ಐ ಆಮ್ ಎ ಲೀಡರ್ – ಚಾಣಕ್ಯ ನೀತಿಯೊಂದಿಗೆ ಯುವಕರ ರಾಜಕೀಯ ಕೈಪಿಡಿ’ ಪುಸ್ತಕದ 2ನೇ ಆವೃತ್ತಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಿದರು.
ಯುವಕರಿಗೆ ರಾಜಕೀಯ ನಾಯಕತ್ವ, ಚಿಂತನೆ ಹಾಗೂ ಸಾರ್ವಜನಿಕ ಬದುಕಿನ ಕುರಿತು ಮಾರ್ಗದರ್ಶನ ನೀಡುವ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತ್ ಜೋಡೋ ಯುವ ಸಂಘದ ಮಹತ್ವವನ್ನು ತಿಳಿಸಿದರು. ಹೆಚ್ಚಿನ ಯುವಕರು ಸಂಘದಲ್ಲಿ ನೋಂದಾಯಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿದ ಸಂಸದರು, ಪ್ರಮುಖ ಸಮಸ್ಯೆಗಳು ಹಾಗೂ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದರು. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಮೂಲಕ ಕರೆ ಮಾಡಿ, ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಪಾಟೀಲ್, ಇಓ ಕಿರಣ್ ಪಾಟೀಲ್, ಸಿಪಿಐ ರಘುವೀರಸಿಂಗ್ ಠಾಕೂರ್, ಮುಖಂಡರಾದ ಸುನಿಲಕುಮಾರ್ ದೇಶಮುಖ, ಸುಧಾಕರ್ ಕೊಳ್ಳೂರ್, ಉದ್ಯಮಿ ಮಾರುತಿ ಚೀಟಗಿರೆ ಹಾಗೂ ರಾಜೇಂದ್ರ ನಾಯಕ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.