×
Ad

Bidar | ಇಫ್ತಾರ್ ಕೂಟ ಸಾಮರಸ್ಯದ ಸಂಕೇತವಾಗಿದೆ : ಡಾ.ಗವಿಸಿದ್ಧಪ್ಪ

ಉರಿಲಿಂಗಪೆದ್ದಿ ಶಾಖಾ ಮಠದಲ್ಲಿ ಇಫ್ತಾರ್ ಕೂಟ ಆಯೋಜನೆ

Update: 2026-03-08 21:02 IST

ಬೀದರ್ : ರಮಝಾನ್ ಒಂದು ತಿಂಗಳು ಶಾಂತಿಯ ಪ್ರತೀಕ ಇಫ್ತಾರ್ ಕೂಟದಿಂದ ಎಲ್ಲರೂ ಒಂದಾಗಿ ಸಹೋದರತೆ, ಸಮಾನತೆ, ಭಾತೃತ್ವ, ಭಾವೈಕ್ಯತೆ, ಮನುಷ್ಯ ಪ್ರಜ್ಞೆ ಬೆಳೆಸುವ ಸಾಮರಸ್ಯದ ಸಂಕೇತವೇ ಇಫ್ತಾರ ಕೂಟವಾಗಿದೆ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಅಭಿಪ್ರಾಯಪಟ್ಟರು.

ಬಸವಕಲ್ಯಾಣ ತಾಲೂಕಿನ ಬೇಲೂರು ಉರಿಲಿಂಗಪೆದ್ದಿ ಮಠದ ಶಾಖಾ ಮಠದಲ್ಲಿ ಶುಕ್ರವಾರ ಏರ್ಪಡಿಸಿದ ಇಫ್ತಾರ್ ಕೂಟ ಹಾಗೂ ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಧರ್ಮಗಳು ಒಳ್ಳೆಯ ವಿಚಾರ ಬೋಧಿಸುತ್ತವೆ. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್‌ ಪೈಗಂಬ‌ರ್ ಅವರು ಸೌಹಾರ್ದ ಬೆಸೆಯುವ ಕಾರ್ಯ ಮಾಡಿದ್ದಾರೆ ಎಂದರು.

ಇಂತಹ ಸೌಹಾರ್ದತೆ ಮಾಡುವ ಕೆಲಸ ಎಲ್ಲ ಮಠಗಳು, ಇತರ ಧರ್ಮೀಯರು ಮಾಡಬೇಕು. ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು ಜಾತ್ಯಾತೀತವಾಗಿ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು, ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.

ಪಂಚಾಕ್ಷರಿ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಮಠವು ಬಡವರ ಮಠವಾಗಿದ್ದು, ನಮ್ಮ ಕೈಲಾದ ಕೆಲಸ ಮಾಡುತ್ತಿದ್ದೇವೆ. ಎಲ್ಲರ ಜೊತೆ ಸೇರಿ ಒಂದಾದರೆ ಒಗ್ಗಟ್ಟು ಬರುತ್ತದೆ. ಬಸವಾದಿ ಶರಣರು, ಉರಿಲಿಂಗಪೆದ್ದಿ ಕೂಡಾ ಇದೇ ಕಾರ್ಯ ಮಾಡಿದ್ದರು. ಇಂಥ ಕಾರ್ಯಕ್ರಮಗಳಿಂದ ಕೋಮು ದ್ವೇಷ ಬೆಳೆಸದೇ ಕೋಮು ಸಾಮರಸ್ಯ ಬೆಳೆಸುವ ಉದ್ದೇಶವಾಗಿದೆ ಎಂದರು.

ಅಬ್ದಲ್ ಖಾದರ್ ಅವರು ಮಾತನಾಡಿ, ಇಸ್ಲಾಂ ಧರ್ಮ ಇವತ್ತು ಬಸವಣ್ಣ ಮೊದಲಾದ ಶರಣರು, ಸಂತ, ಸೂಫಿಗಳು ಒಂದುಗೂಡಿಸಿದ ತತ್ವ, ಸಿದ್ಧಾಂತ ಅಳವಡಿಸಿಕೊಂಡು ಬಂದರೆ ಮಾನವೀಯತೆ ಬೆಳೆಯಲು ಸಾಧ್ಯವಿದೆ. ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತವಿದೆ. ಬದುಕಿನ ಅವಧಿಯಲ್ಲಿ ಸೌಹಾರ್ದತೆ ಬೆಸೆಯುವುದು ಅತ್ಯವಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪಿಎಸ್‌ಐ ಚಂದ್ರಕಾತ್ ನಾರಾಯಣಪುರೆ, ಹಿಂದುಳಿದ ವರ್ಗಗಳ ಇಲಾಖೆ ಭಾಲ್ಕಿ ತಾಲೂಕಾಧಿಕಾರಿ ರವೀಂದ್ರ ಮೇತ್ರೆ, ನೊಬೆಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಬ್ದುಲ್‌ ಖಲೀಲ್ ಗೊಬರೆ ಅವರಿಗೆ ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್‌, ಅಕ್ಷರ ದಾಸೋಹದ ಸಂಜುಕುಮಾ‌ರ್ ಕಾಂಗೆ, ಸಂಜೀವ್ ಜಾದವ್, ನಾಗನಾಥ್ ಚಾಮಲೆ, ಡಾ. ಜಭಿಯಾ, ಎಂ.ಡಿ ಮಸ್ತಾಪ್, ನೂರ್, ಇಮಾಮುದ್ದಿನ್, ಡಾ. ಬಾಲಕೃಷ್ಣ ರಾಠೋಡ್, ಅನ್ನಪೂರ್ಣ ಅಂಬಾರಾಯ್ ಸಂಗೋಳಕರ್, ನಿತ್ಯಾನಂದ್ ಮಂಠಾಳಕ‌ರ್, ಗೌತಮ್, ಶಿವಕುಮಾರ್ ಕಾಂಗೆ, ಅಶೋಕ್ ಗುಪ್ತಾ, ನಾಗಪ್ಪ ನಿಣ್ಣೆ, ಭಿಮಶಾ ವಾಘಮಾರೆ, ದೀಪಕ್ ಸಿಂಗೆ, ವಿಜಯಲಕ್ಷ್ಮಿ, ಸರಸ್ವತಿ ಗಾಯಕವಾಡ್, ಅನುಸಯ್ಯಾ ಮಂಠಾಳಕರ್, ಸಿದ್ದು, ಈಶ್ವರ್ ತಡೋಳಾ, ಕಲ್ಲಪ್ಪ ಬೇಲೂರು ಹಾಗೂ ಶ್ರೀಪತಿ ಸಖರಾಮ್ ಸೇರಿದಂತೆ ಇತರರು ಇದ್ದರು. ಮಹಾಲಿಂಗ್ ಸ್ವಾಗತಿಸಿದರು. ಮಹ್ಮದ್ ಮುಸ್ತಾನ್ ನಿರೂಪಿಸಿದರು. ಸಂಜುಕುಮಾರ್ ಖೇಲೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News