×
Ad

Bidar | ಮಾ. 25 ರಂದು ಈದ್ ಮಿಲನ್ ಸದ್ಭಾವನಾ ಕಾರ್ಯಕ್ರಮ

ವಿಸ್ಡ್ಂ ಕಾಲೇಜಿನಲ್ಲಿ ನಡೆದ ಜಿಲ್ಲಾ ಸದ್ಭಾವನಾ ಮಂಚ್ ಸಭೆಯಲ್ಲಿ ನಿರ್ಧಾರ

Update: 2026-03-07 20:21 IST

ಬೀದರ್: ಜಿಲ್ಲಾ ಸದ್ಭಾವನಾ ಮಂಚ್, ಜಮಾ ಅತೆ ಇಸ್ಲಾಮಿ ಹಿಂದ್ ಹಾಗೂ ರಾಬ್ತಾ ಎ ಮಿಲ್ಲತ್ ಸಹಯೋಗದಲ್ಲಿ ಮಾರ್ಚ್ 25ರಂದು ಈದ್ ಮಿಲನ್ ಸದ್ಭಾವನಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

ನಗರದ ವಿಸ್ಡಮ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸದ್ಭಾವನಾ ಮಂಚ್ ಅಧ್ಯಕ್ಷ ಗುರುನಾಥ್ ಗಡ್ಡೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈದ್ ಮಿಲನ್ ಸದ್ಭಾವನಾ ಕಾರ್ಯಕ್ರಮಕ್ಕೆ ಎಲ್ಲ ಧರ್ಮಗಳ ಗುರುಗಳನ್ನು ಆಹ್ವಾನಿಸುವುದರ ಜೊತೆಗೆ ವಿವಿಧ ಸಮುದಾಯಗಳ ಜನರನ್ನು ಕೂಡ ಒಂದೇ ವೇದಿಕೆಯಲ್ಲಿ ಸೇರಿಸುವಂತೆ ಸಭೆಯಲ್ಲಿ ಪ್ರಮುಖರು ಸಲಹೆ ನೀಡಿದರು.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಸದ್ಭಾವನಾ ಸಭೆಗಳನ್ನು ನಿರಂತರವಾಗಿ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಭಾವನಾ ಮಂಚ್ ಸದಸ್ಯರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವದ ವಾತಾವರಣ ನಿರ್ಮಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸತ್ಯದ ಪರ ಧ್ವನಿ ಎತ್ತಿ ದ್ವೇಷ ಮತ್ತು ಅಶಾಂತಿ ಹರಡದಂತೆ ಯುವಕರಿಗೆ ತಿಳಿಹೇಳಬೇಕು. ಸಣ್ಣಪುಟ್ಟ ಘಟನೆಗಳನ್ನು ಧರ್ಮ ಅಥವಾ ಜಾತಿ ಸಂಘರ್ಷಗಳಾಗಿ ಪರಿವರ್ತಿಸದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಅಹಿತಕರ ಘಟನೆ ನಡೆದರೆ ಅದನ್ನು ಸಮಾಜದಲ್ಲಿ ಹರಡದೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಯುವಕರು ಕಾನೂನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಫ.ಗು. ಹಳಕಟ್ಟಿ ಪ್ರಶಸ್ತಿಗೆ ಭಾಜನರಾದ ಗುರುನಾಥ್ ಗಡ್ಡೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸದ್ಭಾವನಾ ಮಂಚ್ ಸಹ ಸಂಚಾಲಕ ಮುಹಮ್ಮದ್ ನಿಜಾಮುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ವತಿಯಿಂದ ಇಫ್ತಾರ್ ಕೂಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ಫಾದರ್ ಲೂಯಿಸ್, ಡಾ. ಅಬ್ದುಲ್ ಖದೀರ್, ವಿಠ್ಠಲದಾಸ್ ಪ್ಯಾಗೆ, ಡಾ. ಸಿ. ಆನಂದರಾವ್, ಡಾ. ದೀಪಾ ನಂದಿ, ಚೇತನಾ ಮೋಹನ್, ಓಂಪ್ರಕಾಶ್ ರೊಟ್ಟೆ, ಜಗದೀಶ್ ಬಿರಾದಾರ್, ಮಹೇಶ್ ಗೋರನಾಳಕರ್, ವಿಜಯಕುಮಾರ್, ಮಚ್ಚೇಂದ್ರ ವಾಘಮಾರೆ, ಸೈಯದ್ ಇರ್ಫಾನ್, ಆಸ್ಮಾ ಸುಲ್ತಾನಾ, ಬಿಲ್ಕಿಸ್ ಫಾತಿಮಾ, ಸಿದ್ದು ಫುಲಾರಿ, ಸಂತೋಷ್ ಜೋಳದಾಪಕೆ ಹಾಗೂ ವೀರಭದ್ರಪ್ಪ ಉಪ್ಪಿನ್ ಇದ್ದರು. ವಿಸ್ಡ್ಂ ಕಾಲೇಜಿನ ಅಧ್ಯಕ್ಷ ಮುಹಮ್ಮದ್ ಆಸಿಫುದ್ದೀನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News