Bidar | ಅಪರಾಧದ ಮುನ್ನ ಸಾವಿರ ಬಾರಿ ಯೋಚಿಸಿ: ಎಸ್ಪಿ ಪ್ರದೀಪ್ ಗುಂಟಿ
ಜಿಲ್ಲಾ ಕಾರಾಗೃಹದಲ್ಲಿ ‘ಜೈಲಲ್ಲಿ ಜಾನಪದ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ಬೀದರ್ : ಅಪರಾಧವು ಕೇವಲ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಆತನ ಕುಟುಂಬ, ಸಮಾಜ ಹಾಗೂ ಮುಂದಿನ ಪೀಳಿಗೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕ್ಷಣಿಕ ಕೋಪ ಅಥವಾ ತಪ್ಪು ನಿರ್ಧಾರದಿಂದ ಜೀವನವಿಡೀ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಯಾವುದೇ ತಪ್ಪು ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಜಾನಪದ ಕಲಾವಿದರ ಬಳಗ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬೀದರ್ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ‘ಜೈಲಲ್ಲಿ ಜಾನಪದ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈದಿಗಳು ಶಿಕ್ಷೆಯನ್ನು ದಂಡನೆಯಾಗಿ ಪರಿಗಣಿಸದೆ, ಬದುಕನ್ನು ತಿದ್ದಿಕೊಳ್ಳುವ ಅವಕಾಶವಾಗಿ ಸ್ವೀಕರಿಸಬೇಕು. ಆತ್ಮಾವಲೋಕನದ ಮೂಲಕ ಸಮಾಜದ ಮುಖ್ಯವಾಹಿನಿಗೆ ಮರಳಿ ಉತ್ತಮ ನಾಗರಿಕರಾಗಿ ಬದುಕಿದಾಗ ಮಾತ್ರ ಗೌರವ, ವಿಶ್ವಾಸ ಮತ್ತು ಸ್ವಾಭಿಮಾನ ದೊರೆಯುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರತಿಯೊಬ್ಬರೂ ನಿರಪರಾಧಿಯಾಗಿಯೇ ಜನಿಸುತ್ತಾರೆ. ಸಂದರ್ಭ, ಪರಿಸ್ಥಿತಿ ಮತ್ತು ತಪ್ಪು ನಿರ್ಧಾರಗಳಿಂದ ಕೆಲವರು ಅಪರಾಧದ ದಾರಿ ಹಿಡಿಯುತ್ತಾರೆ. ಆದರೆ, ಬದುಕಿನಲ್ಲಿ ಪರಿವರ್ತನೆಗೆ ಯಾವಾಗಲೂ ಅವಕಾಶವಿದ್ದು, ಜಾನಪದ ಕಲೆ ಮತ್ತು ತತ್ವಪದಗಳು ಉತ್ತಮ ಬದುಕಿನ ಮೌಲ್ಯಗಳನ್ನು ಬೋಧಿಸುತ್ತವೆ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಹಾಗೂ ತತ್ವಪದಗಳ ಮೂಲಕ ಕೈದಿಗಳಲ್ಲಿ ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ ಮತ್ತು ಸಮಾಜಮುಖಿ ಮನೋಭಾವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಂಭುಲಿಂಗ್ ವಾಲ್ಗೊಡ್ಡಿ, ಮಾರುತಿ ಕೋಳಿ, ಮಧುಕರ್ ಘೋಡಕೆ ಮತ್ತು ಸಂಗಮೇಶ್ ಬೆಲ್ದಾಳ್ ಜಾನಪದ ಗಾಯನ ಪ್ರಸ್ತುತಪಡಿಸಿದರು. ದಿಲೀಪ್ ಕಾಡವಾದ್, ಮಲ್ಲಿಕಾರ್ಜುನ್ ಸ್ವಾಮಿ, ಶಂಕರ್ ಚೊಂಡಿ, ಸಂಜುಕುಮಾರ್ ಸ್ವಾಮಿ ಅವರ ತಂಡ ತತ್ವಪದ ಗಾಯನ ನಡೆಸಿತು. ದೇವದಾಸ್ ಚಿಮಕೋಡ್ ತಂಡ ಗೀಗಿ ಪದ ಹಾಗೂ ಶಾಂತಮ್ಮಾ ವಾಡೆ ಅವರ ತಂಡ ಸಾಂಪ್ರದಾಯಿಕ ಜಾನಪದ ಕುಣಿತ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ, ಜಿಲ್ಲಾ ಕಾರಾಗೃಹ ಕೇಂದ್ರದ ಅಧೀಕ್ಷಕ ದತ್ತಾತ್ರಿ ಮೇಧಾ ಹಾಗೂ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಅಭಿಯಂತರ ಸುನೀಲ ಆರ್. ಸೇರಿದಂತೆ ಜಿಲ್ಲಾ ಕಾರಾಗೃಹ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಿಯಮಿತ ಜಾನಪದ ಕಲಾವಿದರು, ಕೈದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ ಸ್ವಾಗತಿಸಿದರು. ಚಂದ್ರಕಾಂತ್ ಹಳ್ಳಿಖೇಡಕರ್ ನಿರೂಪಿಸಿದರು. ಸುನೀಲ್ ಭಾವಿಕಟ್ಟಿ ವಂದಿಸಿದರು.