ಯುವಕರಲ್ಲಿ ಬಸವತತ್ವದ ಅರಿವು ಮೂಡಲಿ : ಡಾ.ಬಸವಲಿಂಗ ಪಟ್ಟದೇವರು
ಬೀದರ್: ಬಸವ ಸಂಸ್ಕೃತಿ ಚಿಂತನದಂಥ ಶಿಬಿರಗಳಿಂದ ಯುವಕರಲ್ಲಿ ಬಸವತತ್ವ ನಿಷ್ಠೆ ಗಟ್ಟಿಯಾಗುತ್ತದೆ. ಯುವಕರಲ್ಲಿ ಬಸವತತ್ವದ ನಿಜವಾದ ಅರಿವು ಮೂಡುತ್ತದೆ. ಯುವಕರಲ್ಲಿ ಬಸವತತ್ವದ ಅರಿವು ಮೂಡುವುದು ಅವಶ್ಯಕವಾಗಿದೆ ಎಂದು ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಬಸವಕಲ್ಯಾಣದ ಅನುಭವಮಂಟಪ ಆವರಣದಲ್ಲಿ ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ವತಿಯಿಂದ ಮೂರು ದಿವಸಗಳು ಆಯೋಜಿಸಲಾದ ಬಸವ ಸಂಸ್ಕೃತಿ ಚಿಂತನ ಶಿಬಿರದ ಉದ್ಘಾಟನೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯುವಕರಲ್ಲಿ ಬಸವತತ್ವದ ನಿಜವಾದ ಅರಿವು ಮೂಡಿಸುವ ದಿಶೆಯಲ್ಲಿ ಬಸವ ಸಂಸ್ಕೃತಿ ಚಿಂತನ ಶಿಬಿರ ಆಯೋಜಿಸಲಾಗಿದೆ. ಮೂರು ದಿವಸಗಳಲ್ಲಿ ಬಸವಾದಿ ಶರಣರ, ಲಿಂಗಾಯತ ಧರ್ಮದ ಕುರಿತು ಸುಮಾರು 20 ವಿಷಯಗಳ ಮೇಲೆ ವಿದ್ವಾಂಸರಿಂದ ಅನುಭಾವ ಚಿಂತನೆ ನಡೆಯಲಿದೆ ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ್ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಮಾಡಿರುವ ಕ್ರಾಂತಿ ಅಪೂರ್ವವಾಗಿದೆ. ಶರಣರು ಸಮಸಮಾಜದ ಜೊತೆಗೆ ದುಶ್ಚಟ, ದುರ್ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣ ಮಾಡಿದರು. ಅವರ ಬದುಕಿನ ಮೌಲ್ಯಗಳೇ ಮುಂದಿನ ದಿನಮಾನಗಳಲ್ಲಿ ಅನೇಕ ಸಂತ ಮಹಾತ್ಮರು, ಅನುಭಾವಿಗಳು ಬೋಧಿಸುತ್ತ ಬಂದಿರುತ್ತಾರೆ. ವ್ಯಸನಮುಕ್ತ ಸಮಾಜದ ಮೌಲ್ಯಗಳನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಮಾಜದಲ್ಲಿ ಜಾಗೃತಿ ಮಾಡುವ ಕಾರ್ಯ ಮಾಡುತ್ತಿವೆ ಎಂದು ಅವರು ತಿಳಿಸಿದರು.
ಭಾಲ್ಕಿಯ ಶ್ರೀಗಳು ಯುವಕರಲ್ಲಿ ಬಸವಪ್ರಜ್ಞೆ ಮೂಡಿಸುವ ಮೂಲಕ ಅನೇಕ ದಶಕಗಳಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ. ಬಸವಾದಿ ಶರಣ ಭೂಮಿಯಾದ ಬಸವಕಲ್ಯಾಣದಲ್ಲಿ ಇಂತಹ ಒಂದು ಶಿಬಿರ ಉದ್ಘಾಟನೆ ಮಾಡುವ ಅವಕಾಶ ದೊರೆಕಿರುವುದು ನಿಜಕ್ಕೂ ನನಗೆ ಧನ್ಯತೆ ಭಾವವನ್ನು ಮೂಡಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಬಸವ ಪಟ್ಟದೇವರು ಆಶಯ ನುಡಿ ನುಡಿದರು. ಶಿವಾನಂದ್ ಸ್ವಾಮಿ ಹಾಗೂ ಲಾವಣ್ಯ ಮಾತಾಜಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಶರಣ ಜಗನ್ನಾಥರೆಡ್ಡಿ, ಡಾ.ಎಸ್.ಬಿ.ದುರ್ಗೆ, ಜಯಪ್ರಕಾಶ್ ಸದಾನಂದೆ, ಕಲ್ಯಾಣರಾವ್ ಶಿವಣಕರ್, ಜಗನ್ನಾಥ್ ಪತಂಗೆ, ಗೌತಮ ಬುದ್ಧ, ನಂದೀಶ್ ಎಂ.ಎಸ್. ಹಾಗೂ ಕೆ.ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಗಮೇಶ್ ತೊಗರಖೇಡೆ ನಿರೂಪಿಸಿದರು. ಸಚೀನ್ ಕೌಂಟೆ ಸಮರ್ಪಣೆ ಮಾಡಿದರು.