×
Ad

ಗಡಿಭಾಗದಲ್ಲಿ ಕನ್ನಡತ್ವ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ : ಪ್ರಕಾಶ್ ದೇಶಮುಖ್

Update: 2026-05-26 20:43 IST

ಔರಾದ್ : ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಪ್ರಕಾಶ್ ದೇಶಮುಖ್ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಸಂತಪೂರ್ ಗ್ರಾಮದ ಆನಂದ್ ಪ್ರೌಢ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಜಿಲ್ಲಾ ಘಟಕ ಬೀದರ್‌ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವು ವಿಷಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕುಸಿಯುತ್ತಿದ್ದು, ಆಂಗ್ಲ ಮಾಧ್ಯಮದ ಪ್ರಭಾವ ಹೆಚ್ಚುತ್ತಿದೆ. ಇದರಿಂದ ಮಕ್ಕಳಿಗೆ ಕನ್ನಡ ಶಿಕ್ಷಣ ದೊರೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕನ್ನಡ ಭಾಷೆಯ ಉಳಿವಿಗಾಗಿ ಸರ್ಕಾರ ಹಾಗೂ ಸಮಾಜ ಜಂಟಿಯಾಗಿ ಕೈಜೋಡಿಸಬೇಕು. ಗಡಿಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಕನ್ನಡ ಶಿಕ್ಷಕರ ನೇಮಕಾತಿ, ಗ್ರಂಥಾಲಯಗಳ ಸ್ಥಾಪನೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಉಪನ್ಯಾಸಕ ದತ್ತಾತ್ರಿ ಮಡಿವಾಳ್ ಅವರು ಮಾತನಾಡಿ, ಕರ್ನಾಟಕದ ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಿನ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಘದೊಂದಿಗೆ ನಿಕಟ ಸಂಬಂಧ ಹೊಂದಿದ ಅನೇಕ ಲೇಖಕ, ಸಾಹಿತಿಗಳು ಕರ್ನಾಟಕತ್ವವನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ. ಇದೀಗ ವಿದ್ಯಾವರ್ಧಕ ಸಂಘವು ನಾಡಿನಾದ್ಯಂತ ಸಾಹಿತ್ಯ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕ ಮಹೇಶ್ ಗೋರನಾಳಕರ್‌ ಅವರು ಮಾತನಾಡಿ, ಯುವಜನರು ಇತರ ಭಾಷೆಗೆ ಗೌರವಿಸುವ ಜೊತೆಗೆ ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡುವ ಅಭ್ಯಾಸ ಬೆಳೆಸಬೇಕು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದ ಅವರು, ಗಡಿಭಾಗದಲ್ಲಿ ಕನ್ನಡದ ಬಹುತ್ವ ಸಂಸ್ಕೃತಿ ಉಳಿಸಿ ಬೆಳೆಸಲು ಕಲೆ, ಸಾಹಿತ್ಯಿಕ ಕಾರ್ಯಕ್ರಮ ಆಯೋಜನೆ, ಹೊಸ ತಲೆಮಾರಿನ ಬರಹಗಾರರನ್ನು ಗುರುತಿಸುವ ಕೆಲಸ ಸಂಘದಿಂದ ನಡೆಸಲಾಗುವುದು ಎಂದು ಭರವಸೆ ನೀಡಿದರು.

ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ್ ಮಾಳಗೆ ಅವರು ಮಾತನಾಡಿ,ಕನ್ನಡ ಭಾಷೆಯ ಬೆಳವಣಿಗೆಯ ಜೊತೆಗೆ ಪರಿಸರ ಉಳಿಸುವ ಕಾರ್ಯವೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಾಷೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಪ್ರತೀಕವಾಗಿದ್ದರೆ, ಪರಿಸರ ನಮ್ಮ ಜೀವನದ ಆಧಾರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು ಒಂದು ಕಡೆ ಚಿಂತೆಯ ವಿಷಯವಾಗಿದ್ದರೆ, ಮತ್ತೊಂದು ಕಡೆ ಪರಿಸರ ಮಾಲಿನ್ಯ ಮತ್ತು ಅರಣ್ಯ ನಾಶವೂ ದೊಡ್ಡ ಸಮಸ್ಯೆಯಾಗಿದೆ. ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ-ಮರ ಬೆಳೆಸಲು ಮುಂದಾಗೋಣ ಎಂದು ನುಡಿದರು.

ಪತ್ರಕರ್ತ ಬಾಲಾಜಿ ಕುಂಬಾರ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಜರುಗಿದ ನೃತ್ಯ, ನಾಟಕ, ಗಾಯನ ಸಭಿಕರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಅನೀಲ್ ಪಾಟೀಲ್‌ ಧುಪತಮಹಾಗಾಂವ್‌, ನ್ಯಾಯವಾದಿ ಪ್ಯಾರುಸಾಬ್‌ ಶೇಖ್‌, ಶಿಕ್ಷಕರಾದ ರಾಜರೆಡ್ಡಿ, ಮಾಲಸ್ವಾಮಿ, ಶೀಲಾವತಿ, ಕಲ್ಪನಾ, ಉಮಾಕಾಂತ್, ಭೀಮಾಶಂಕರ್ ವೈರಾಗ್ಯ ಹಾಗೂ ರವಿ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News