ಹುಲಸೂರ್ | ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಅಗತ್ಯ: ಚನ್ನಬಸಪ್ಪ ಪತಂಗೆ
ಹುಲಸೂರ್: ಇಂದಿನ ದಿನಮಾನದಲ್ಲಿ ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯವಾಗಿದೆ. ತಂದೆ, ತಾಯಿ ಹಾಗೂ ಶಿಕ್ಷಕರ ಮನಸ್ಸಿಗೆ ನೋವುಂಟು ಮಾಡುವಂತಹ ಕೆಲಸಗಳನ್ನು ಯುವಜನತೆ ಮಾಡಬಾರದು ಎಂದು ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ ಹೇಳಿದರು.
ತಾಲೂಕಿನ ಮುಚಳಂಬ ಗ್ರಾಮದ ಶ್ರೀ ರಾಮಲಿಂಗೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ 1984–85ನೇ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಕಲಿತ ವಿದ್ಯಾರ್ಥಿಗಳು ತಮ್ಮನ್ನು ಕಲಿಸಿದ ಗುರುಗಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಆದರ ಹಾಗೂ ಗೌರವದಿಂದ ಕಾಣುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ತಂದೆ–ತಾಯಿಗಳನ್ನು ವೃದ್ಧಾಶ್ರಮಕ್ಕೆ ಅಥವಾ ಬೀದಿಗೆ ತಳ್ಳುವಂತಹ ಘಟನೆಗಳು ಹೆಚ್ಚುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸುಮಾರು 50 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೇ ಗುರು ವಂದನೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ವಿಷಯ ಎಂದು ನಿವೃತ್ತ ಶಿಕ್ಷಕ ಎಸ್. ಕಾಶಿನಾಥ್ ಹೇಳಿದರು.
ಹಳೆಯ ವಿದ್ಯಾರ್ಥಿಗಳ ಪರವಾಗಿ ರಮೇಶ್ ಮೂಲಗೆ ಪ್ರಸ್ತಾವಿಕವಾಗಿ ಮಾತನಾಡಿ, ಶಿಕ್ಷಕರು ನೀಡಿದ ಶಿಕ್ಷಣದಿಂದಲೇ ನಮ್ಮ ಭವಿಷ್ಯ ರೂಪುಗೊಂಡಿದೆ. ನಮಗೆ ಪಾಠ ಕಲಿಸಿದ ಎಲ್ಲಾ ಗುರುಗಳಿಗೆ ನಾವು ಸದಾ ಋಣಿಯಾಗಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಮಲ್ಲಮ್ಮ ಜೋಕಾರೆ, ರಮೇಶ್ ಮೂಲಗೆ ಹಾಗೂ ಅನೀಲಕುಮಾರ್ ಕಾಮಶೇಟಿ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಾಗೂ ಗುರುಗಳ ಕುರಿತು ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ರವೀಂದ್ರ ಬಿರಾದಾರ್, ಕಾಶಿನಾಥ ಎಚ್., ರಾಜಶೇಖರ್, ಕಾಶಿನಾಥ್ ಬೆಸಂಗಿ, ಬಸವಣ್ಣಪ್ಪ ಚಾಕೋಟೆ, ಷಣ್ಮುಖ ಘಾಳೆ, ರಾಜಶೇಖರ್ ಬಿರಾದಾರ್, ಮನೋಹರ್ ಹಂಚೆ ಹಾಗೂ ಗುಂಡಣ್ಣ ಡಿಗ್ಗಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಶೋಕ್
ಸ್ವಾಗತಿಸಿದರು. ಶಿಕ್ಷಕ ಶಿವಶಂಕರ್ ಪತಂಗೆ ನಿರೂಪಿಸಿದರು.