Bidar | ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಸೆ.7 ರಂದು ಪ್ರತಿಭಟನೆ
ಬೀದರ್: ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಸೆ.7 ರಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿನೋದ್ ರತ್ನಾಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ನಿರಂತರವಾಗಿ ದಲಿತರ ಮೇಲೆ ಅನ್ಯಾಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆಯಂತಹ ಘಟನೆಗಳು ಸಂಭವಿಸುತ್ತಿವೆ. ಸುಮಾರು ಪ್ರಕರಣಗಳು ನಡೆದರು ಕೂಡ ಇಲ್ಲಿನ ರಾಜಕೀಯ ಪ್ರಭಾವಿ ವ್ಯಕ್ತಿಗಳು ಮತ್ತು ಪೊಲೀಸ್ ಇಲಾಖೆ ಸೂಕ್ತವಾದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಇದರ ವಿರುದ್ಧ ನಿರಂತರವಾಗಿ ಹೋರಾಟಗಳು ನಡೆಸಿದ್ದೇವೆ. ಆದರೂ ಕೂಡ ಬೀದರ್ ಜಿಲ್ಲೆಯಲ್ಲಿ ದಲಿತರ ಮೇಲಿನ ಅನ್ಯಾಯ ಅತ್ಯಾಚಾರವನ್ನು ನಿಲ್ಲಿಸುವ ಸೂಚನೆಗಳು ಕಾಣುತ್ತಿಲ್ಲ. ಭಾಲ್ಕಿ ತಾಲೂಕಿನ ಜಿರ್ಗ್ಯಾಳ್ ಗ್ರಾಮದಲ್ಲಿ ದಲಿತ ವ್ಯಕ್ತಿಯ ಹತ್ಯೆಯಾಯಿತು. ಔರಾದ್ ತಾಲೂಕಿನಲ್ಲಿ ದಲಿತ ಯುವತಿಯ ಹತ್ಯೆಯಾಯಿತು. ಇದೀಗ ಮಳಚಾಪುರ್ ಗ್ರಾಮದಲ್ಲಿ ದಲಿತರ ಮನೆಗಳನ್ನು ಕೆಡುವುದಕ್ಕೆ ಬಂದಿದ್ದಾರೆ ಎಂದು ಅವರು ಕಿಡಿಕಾರಿದರು.
ಗೌರವಾಧ್ಯಕ್ಷ ರಾಜಕುಮಾರ್ ಮೂಲಭಾರತಿ ಅವರು ಮಾತನಾಡಿ, ನಮ್ಮ ಜಿಲ್ಲೆಗೆ ಬಹಳಷ್ಟು ಒಳ್ಳೆಯ ಪೊಲೀಸ್ ವರಿಷ್ಠಾಧಿಕಾರಿಗಳು ಬಂದು ಹೋಗಿದ್ದಾರೆ. ಆವಾಗ ದಲಿತ ಹೋರಾಟಗಾರರ ಮೇಲೆ ಕಿರಕುಳ ನಡೆದಿಲ್ಲ. ಆದರೆ, ಇವಾಗಿನ ಎಸ್ಪಿ ಅವರಿಗೆ ದಲಿತರು, ಹೋರಾಟ ಎಂದರೆ ಅಲರ್ಜಿಯಾಗಿದೆ. ಹೋರಾಟಗಳನ್ನು ಹತ್ತಿಕ್ಕಲು ಅವರು ಸರ್ಕಾರದಿಂದೆನಾದರೂ ಅನುಮತಿ ಪಡಟೆದುಕೊಂಡು ಬಂದಿದ್ದಾರೆಯೇ ಎಂದು ಎಸ್ಪಿ ಪ್ರದೀಪ್ ಗುಂಟಿ ಅವರ ವಿರುದ್ಧ ಹರಿಹಾಯ್ದರು.
ಎಟಿಎಂ ದರೋಡೆ ಪ್ರಕರಣದಲ್ಲಿ ದಲಿತ ಯುವಕನ ಹತ್ಯೆಯಾಯಿತು. ಆ ಪ್ರಕರಣದ ಆರೋಪಿಗಳನ್ನು ಸುಮಾರು 18 ರಿಂದ 19 ತಿಂಗಳ ನಂತರ ಅವರನ್ನು ಬಂಧಿಸಲಾಯಿತು. ಆದರೆ, ಆರೋಪಿಗಳನ್ನು ಬಂಧಿಸಿದ ನಂತರ ನಗರದಲ್ಲಿ ವಿಜಯೋತ್ಸವ ನಡೆಸಲಾಯಿತು. ನಮ್ಮ ಯುವಕನ ಹತ್ಯೆಯಾದ ಸ್ಥಳದಲ್ಲಿ ಹೋಗಿ ಪೊಲೀಸರು ವಿಜಯೋತ್ಸವ ನಡೆಸಿದರು. ಇವರಿಗೆ ಮಾನ ಮರ್ಯಾದೆ ಇಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆ.7ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ರಾಹುಲ್ ಖಂದಾರೆ ಅವರು ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ಉಸ್ತುವಾರಿ ಸಚಿವರ ಕ್ಷೇತ್ರವಾದ ಭಾಲ್ಕಿ ತಾಲೂಕಿನಲ್ಲಿ ನಡೆಯುತ್ತಿವೆ. ಭಾಲ್ಕಿಯ ಮೇಹಕರ್ ಪೊಲೀಸ್ ಠಾಣೆಯಲ್ಲಿ ಅತೀ ಹೆಚ್ಚು ಘಟನೆ ನಡೆಯುತ್ತಿವೆ. ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ರಜೆ ಹಾಕುತ್ತಿದ್ದಾರೆ. ಇದೆಲ್ಲ ಪ್ಲ್ಯಾನ್ ಮಾಡಿಯೇ ಮಾಡಲಾಗುತ್ತಿದೆ ಎಂದರು.
ಭಾಲಕಿ ತಾಲೂಕಿನ ಮಳಚಾಪುರದಲ್ಲಿ ದಲಿತರ ಮನೆಗಳು ಕೆಡವಲಾಗುತ್ತಿದೆ. ಆ ದಲಿತರ ಮನೆಗಳಲ್ಲಿ ಒಂದು ಮನೆ ಸರ್ಕಾರದಿಂದಲೆ ಮಂಜೂರಾಗಿದೆ. ಆದರೂ ಅದನ್ನು ಕೆಡುವುದಕ್ಕೆ ಮುಂದಾಗಿದ್ದಾರೆ. ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತುವವರ ಧ್ವನಿ ಅಡಗಿಸುವ ಕೆಲಸವಾಗುತ್ತಿದೆ. ಆದ್ದರಿಂದಾಗಿ ಜಿಲ್ಲೆಯ ಜನರು ಸೆ.7 ರ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ್ ಪ್ಯಾಂಥರ್ನ ರಾಜ್ಯಾಧ್ಯಕ್ಷ ರಾಹುಲ್ ದಲಾಲೆ, ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ್ ಸಿಂಧೆ, ಗೌತಮ್ ಕಾಂಬಳೆ, ಗೌತಮ್ ಬಗದಲಕರ್, ಪ್ರಕಾಶ್ ರಾವಣ, ಹರ್ಷಿತ್ ದಾಂಡೆಕರ್, ಮಾರುತಿ ಕಾಂಬಳೆ ಹಾಗೂ ದೀಲಿಪಕುಮಾರ್ ವರ್ಮಾ ಸೇರಿದಂತೆ ಇತರರು ಇದ್ದರು.