Bidar | ಸೆ.6 ರಂದು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಸಾಂದರ್ಭಿಕ ಚಿತ್ರ
ಬೀದರ್: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಕುರಿತ ಸೀರತ್ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 6ರಂದು ನಗರದ ಸಿದ್ಧಿ ತಾಲೀಂನಲ್ಲಿರುವ ವಿಸ್ಡಂ ಕಾಲೇಜಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಉಸ್ತುವಾರಿ ಮುಹಮ್ಮದ್ ಸಲಾವುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಪ್ರವಾದಿ ಮುಹಮ್ಮದ್ (ಸ) ಸಾಮಾಜಿಕ ಕ್ರಾಂತಿಯ ಹರಿಕಾರರು’ ಹಾಗೂ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ಪ್ರವಾದಿ ಮುಹಮ್ಮದ್ (ಸ) ಆರ್ಥಿಕ ಕ್ರಾಂತಿಯ ಹರಿಕಾರರು’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಬಂಧ ಬರೆಯಲು 60 ನಿಮಿಷಗಳ ಕಾಲಾವಕಾಶವಿದ್ದು, ವಿದ್ಯಾರ್ಥಿಗಳು ಕನ್ನಡ, ಉರ್ದು ಅಥವಾ ಇಂಗ್ಲಿಷ್ ಭಾಷೆಯಲ್ಲಿ ಗರಿಷ್ಠ 1,500 ಪದಗಳಲ್ಲಿ ಪ್ರಬಂಧ ಬರೆಯಬಹುದು. ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ 5,000 ರೂ., ದ್ವಿತೀಯ 3,000 ರೂ. ಹಾಗೂ ತೃತೀಯ 2,000 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸೆಪ್ಟೆಂಬರ್ 6ರಂದು ಬೆಳಿಗ್ಗೆ 10.30ಕ್ಕೆ ಕಾಲೇಜಿಗೆ ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 91418 18744ಕ್ಕೆ ಸಂಪರ್ಕಿಸಬಹುದು ಎಂದು ಮುಹಮ್ಮದ್ ಸಲಾವುದ್ದೀನ್ ತಿಳಿಸಿದ್ದಾರೆ.