×
Ad

ಚಾಮರಾಜನಗರ | ಕರಿಕಲ್ಲು ಕ್ವಾರಿ ಚಿರತೆಯ ಕಳೇಬರ ಪತ್ತೆ; ವಿಷಪ್ರಾಶನ ಶಂಕೆ

Update: 2025-07-11 17:31 IST

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ 5 ಹುಲಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಚಾಮರಾಜನಗರ ತಾಲೂಕಿನ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯೊಂದರ ಬಳಿ ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವಿಷಪ್ರಾಶನ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಬಳಿಯ ಕರಿಕಲ್ಲು ಕ್ವಾರಿ ಸಮೀಪದ ಕಲ್ಲಿನ ಮೇಲೆ 5-6 ವರ್ಷ ವಯಸ್ಸಿನ ಗಂಡು ಚಿರತೆಯ ಕಳೇಬರ ಪತ್ತೆಯಾಗಿದ್ದು, ಎರಡು ಮೂರು ದಿನಗಳ ಹಿಂದೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.

ಚಿರತೆ ಕಳೇಬರ ಪತ್ತೆಯಾಗಿರುವ ಸಮೀಪದಲ್ಲಿಯೇ ಕರು ಹಾಗೂ ನಾಯಿಯ ಕಳೇಬರ ಕೂಡ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಿರತೆಯ ಕಳೇಬರವನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಂಡೀಪುರದ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಪಶು ವೈದ್ಯರಾದ ಡಾ.ವಾಸಿಂ, ಡಾ.ಮೂರ್ತಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕಳೇಬರವನ್ನು ಸುಡಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಕಳೆದ 2023ರ ಡಿಸೆಂಬರ್‌ನಲ್ಲಿ ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಬಳಿಯ ಕರಿಕಲ್ಲು ಕ್ವಾರಿ ಸಮೀಪ 2 ಹುಲಿಗಳು ಮೃತಪಟ್ಟು ಹಲವು ದಿನಗಳ ನಂತರ ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಈ ಹುಲಿಗಳು ಯಾವ ಕಾರಣಕ್ಕೆ ಮೃತಪಟ್ಟವು ಎಂಬುದು ನಿಗೂಢವಾಗಿಯೇ ಉಳಿಯಿತು. ಇದೀಗ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯ ಬಳಿಯೇ ಚಿರತೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿಸಿಎಫ್, ಡಿಸಿಎಫ್ ಭೇಟಿ : ಚಿರತೆ ಕಳೇಬರ ಪತ್ತೆಯಾಗಿರುವ ಸ್ಥಳಕ್ಕೆ ಸಿಸಿಎಫ್ ಹೀರಾಲಾಲ್, ಬಿಆರ್ಟಿ ಹುಲಿ ಯೋಜನೆ ನಿರ್ದೇಶಕ ಶ್ರೀಪತಿ, ಎಸಿಎಫ್ ಮಂಜುನಾಥ್, ಪ್ರಾದೇಶಿಕ ಅರಣ್ಯ ವಲಯದ ಆರ್ ಎಫ್ಒ ಸಂದೀಪ್, ಡಿಆರ್ಎಫ್ಒ ಅಮರನಾಥ್, ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News