ಅಹ್ಮದ್ ಎ.ಕೆ. ಯಶಸ್ವಿ ಉದ್ಯಮಿ ಮಾತ್ರವಲ್ಲ ದೂರದೃಷ್ಟಿಯ ನಾಯಕ: ಯೆನೆಪೊಯ ಅಬ್ದುಲ್ಲ ಕುಂಞಿ
ಎ.ಕೆ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಅಹ್ಮದ್ರ ಜೀವನ ಚರಿತ್ರೆ ಕೃತಿ ಬಿಡುಗಡೆ
ಮಂಗಳೂರು: ಶ್ರಮಜೀವಿಯಾಗಿದ್ದ ಅಹ್ಮದ್ ಎ.ಕೆ. ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಅವರ ಧೈರ್ಯ ಮತ್ತು ಕೆಲಸದ ಮೇಲೆ ಅವರ ನಿಷ್ಠೆ ಮೆಚ್ಚುವಂತದ್ದು, ಪರಿಶ್ರಮಿಯಾಗಿದ್ದ ಅವರು ಯಶಸ್ವಿ ಉದ್ಯಮಿ ಮಾತ್ರವಲ್ಲ ದೂರದೃಷ್ಟಿಯ ನಾಯಕರಾಗಿದ್ದರು, ಸ್ಫೂರ್ತಿಯ ಚಿಲುಮೆಯೂ ಆಗಿದ್ದರು ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವೈ. ಅಬ್ದುಲ್ಲ ಕುಂಞಿ ಹೇಳಿದರು.
ನಗರದ ಟಿ.ಎಂ.ಎ. ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಶುಕ್ರವಾರ ನಡೆದ ಎ.ಕೆ.ಗ್ರೂಪ್ ಆಫ್ ಕಂಪೆನಿಗಳ ಸ್ಥಾಪಕಾಧ್ಯಕ್ಷ ಮರ್ಹೂಂ ಎಂ.ಅಹ್ಮದ್ ಎ.ಕೆ .ಅವರ ಜೀವನ ಚರಿತ್ರೆಯ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾತಿ, ಮತ, ಧರ್ಮ ಮೀರಿ ಸೇವಾ ಮನೋಭಾವ ಹೊಂದಿದ್ದ ಅವರು ಅನ್ನದಾತರೂ ಆಗಿದ್ದರು. ಬದುಕಿನಲ್ಲಿ ಸದಾ ಶಿಸ್ತು, ಸಮಯ ಪ್ರಜ್ಞೆ ಹೊಂದಿದ್ದ ಅವರು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಅವರ ತ್ಯಾಗವನ್ನು ಸದಾ ಸ್ಮರಿಸುವ ಅಗತ್ಯವಿದೆ ಎಂದು ಡಾ.ವೈ. ಅಬ್ದುಲ್ಲ ಕುಂಞಿ ನುಡಿದರು.
ಮಸ್ಜಿದುನ್ನೂರು ಮಸೀದಿಯ ಖತೀಬ್ ಇ.ಪಿ. ಅಬ್ದುಲ್ ಅಝೀಝ್ ಮೌಲವಿ ದುಆಗೈದರು. ಅಂತರ್ರಾಷ್ಟ್ರೀಯ ತರಬೇತುದಾರ ಮತ್ತು ಲೇಖಕ ಡಾ. ಸೈಯದ್ ಹಬೀಬ್ ಕೃತಿ ರಚನೆಯ ಹಿಂದಿನ ಅನುಭವ ಹಂಚಿಕೊಳ್ಳುವುದ ರೊಂದಿಗೆ ದಿಕ್ಸೂಚಿ ಭಾಷಣಗೈದರು. ಅಹ್ಮದ್ ಎ.ಕೆ. ಅವರ ಮೊಮ್ಮಕ್ಕಳಾದ ಖದೀಜಾ ಫಾತಿಮಾ, ಆಯಿಶಾ ಫಾತಿಮಾ ಅನುಸ್ಮರಣಾ ಮಾತುಗಳನ್ನಾಡಿದರು.
ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಮುಹಮ್ಮದ್ ಇಸ್ಮಾಯೀಲ್ ಹೆಜಮಾಡಿ, ನ್ಯಾಶನಲ್ ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ಸ್ನ ಮಾಜಿ ಅಧ್ಯಕ್ಷ ಡಾ. ಸಂತೋಷ್ ಸೋನ್ಸ್, ಹರಿಯಾಣ ಕಲ್ಯಾಣ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಜಗಮೋಹನ್ ಸಿಂಗ್, ಶಾಂತಿ ಪ್ರಕಾಶನದ ಮ್ಯಾನೇಜರ್ ಮುಹಮ್ಮದ್ ಕುಂಞಿ, ರೈನ್ ಬೊ ಇಂಡಸ್ಟ್ರೀಸ್ನ ಭರತ್ ಧೀರಜ್ಲಾಲ್, ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಪಿ.ಎಚ್. ರಾಣೆ, ಮಸ್ಜಿದ್ ಉಲ್ ಎಹ್ಸಾನ್ನ ಖತೀಬ್ ಮೌಲಾನಾ ತಯ್ಯಿಬ್, ತಿವಾರಿ ಮಾತನಾಡಿದರು.
ಮಂಗಳೂರು ಎ.ಕೆ. ಸನ್ಸ್ನ ಹಸೈನಾರ್ ಎ.ಕೆ., ಮಂಗಳೂರು ಸ್ಪೊರ್ಟಿಂಗ್ ಕ್ಲಬ್ನ ಮಾಜಿ ಫುಟ್ಬಾಲ್ ಆಟಗಾರ ಅಬ್ದುಲ್ ರವೂಫ್, ಕಣ್ಣೂರು ಪ್ರೆಸ್ಟೀಜ್ ಗ್ರೂಪ್ನ ನಿರ್ದೇಶಕ ಝಿಯಾದ್ ಕೆ.ಎಸ್, ಹೊಸದಿಲ್ಲಿಯ ವಿಶ್ವನಾಥ್ ಆ್ಯಂಡ್ ಸನ್ಸ್ನ ಪಾಲುದಾರ ಪ್ರವೀಣ್ ಮದನ್, ಅಕೋಲೈಟ್ ಇಂಡಸ್ಟ್ರಿಯಲ್ ಸಿಸ್ಟಮ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಅಬ್ದುಲ್ ರಝಾಕ್ ತಣ್ಣೀರುಬಾವಿ, ಅಬ್ದುಲ್ ರಹೀಂ ಉಪಸ್ಥಿತರಿದ್ದರು.
ಎ.ಕೆ. ಗ್ರೂಪ್ ಆಫ್ ಕಂಪನಿಯ ಪಾಲುದಾರರಾದ ನಿಯಾಝ್ ಎ.ಕೆ., ನೌಶಾದ್ ಎ.ಕೆ., ನಾಝಿಮ್ ಎ.ಕೆ., ಸಾಜಿದ್ ಎ.ಕೆ., ಮತ್ತು ಕಂಪೆನಿಯ ನಿರ್ದೇಶಕ ಅನಿಲ್ ಕೆ. ಪಾಲ್ಗೊಂಡಿದ್ದರು.
ಎ.ಕೆ. ಗ್ರೂಪ್ ಆಫ್ ಕಂಪನಿಯ ನಿರ್ದೇಶಕ ಡಾ. ಪ್ರಶಾಂತ್ ಸ್ವಾಗತಿಸಿದರು. ರೈಫ್ ಕಿರಾಅತ್ ಪಠಿಸಿದರು. ಶಮಾಝ್ ಕಾರ್ಯಕ್ರಮ ನಿರೂಪಿಸಿದರು. ಶಹಾನ್ ಅಹ್ಮದ್ ಎ.ಕೆ. ವಂದಿಸಿದರು.