ವಿದ್ಯುತ್ ದರವನ್ನು ಕೆಇಆರ್ಸಿ ನಿಗದಿ ಮಾಡುತ್ತದೆ: ಜೆ.ಆರ್.ಲೋಬೊ
ಮಂಗಳೂರು, ಆ.4: ವಿದ್ಯುತ್ ದರವನ್ನು ನಿಗದಿ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ( ಕೆಇಆರ್ಸಿ) ವಿದ್ಯುತ್ ದರ ನಿಗದಿ ಮಾಡುತ್ತದೆ. ಆದರೆ ಬಿಜೆಪಿಯು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಿ, ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಸ್ಪಷ್ಟಪಡಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಇಆರ್ಸಿ ನಿಗದಿಪಡಿಸಿ ವಿದ್ಯುತ್ ದರವನ್ನು ಮೆಸ್ಕಾಂ, ಕೆಪಿಟಿಸಿಎಲ್ ಮತ್ತಿತರರ ವಿದ್ಯುತ್ ಕಂಪೆನಿಗಳು ಗ್ರಾಹಕರಿಂದ ವಸೂಲಿ ಮಾಡುತ್ತದೆ. ಆದ ಕಾರಣ ಗ್ರಾಹಕರು ಪಾವತಿಸಬೇಕಾದ ವಿದ್ಯುತ್ ದರಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವನ್ನು ದೂರುವುದು ಸರಿಯಲ್ಲ ಎಂದರು.
ದೇಶದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸುಧಾರಣೆಗಳ ಉದ್ದೇಶಕ್ಕಾಗಿ ಜುಲೈ 1999 ರಲ್ಲಿ ಕೆಇಬಿಯನ್ನು ವಿಂಗಡೆ ಮಾಡಿ ಕೆಪಿಟಿಸಿಎಲ್ ಅನ್ನು ರಚಿಸಲಾಯಿತ್ತು. 1999ರ ಜುಲೈ 31ರಂದು ಕರ್ನಾಟಕ ಸರಕಾರ , ಕೆಇಬಿ ಮತ್ತು ಯೂನಿಯನ್, ಸಂಘಗಳ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿತ್ತು. ಕೆಇಬಿ , ಕೆಪಿಟಿಸಿಎಲ್, ಎಸ್ಕಾಂನಲ್ಲಿ ದುಡಿಯುವ ನೌಕರರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಇರುವ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್ಗೆ ಕರ್ನಾಟಕ ಸರಕಾರವು 2021ರತನಕ 12,700 ಕೋಟಿ ರೂ.ಗಳನ್ನು ಜಮೆ ಮಾಡಿತ್ತು. ಆದರೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು 2022ರ ಮಾ.9ರಂದು ಹೊರಡಿಸಿದ ಆದೇಶದಲ್ಲಿ ಈ ಹಣವನ್ನು ಸರಕಾರಕ್ಕೆ ಕೊಡಲು ಸಾಧ್ಯವಿಲ್ಲ. ಗ್ರಾಹಕರ ಬಿಲ್ನ ಮೂಲಕವೇ ವಸೂಲಿ ಮಾಡಬೇಕು ಎಂದು ಹೇಳಿತ್ತು. ಅನಂತರ ಎರಡು ವರ್ಷಗಳ ಬಾಕಿ ಹಣವನ್ನು ವಸೂಲಿ ಮಾಡಲು ರಾಜ್ಯ ಸರಕಾರ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಬಳಕೆ ದಾರರು ಹೈಕೋರ್ಟ್ನ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ಸರಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು.
ಪಿಂಚಣಿ ಮತ್ತು ಗ್ರಾಚ್ಯುಟಿಗೆ ಗ್ರಾಹಕರ ಬಿಲ್ನಲ್ಲಿ ವಸೂಲಿ ಮಾಡುವ ನಿರ್ಧಾರವನ್ನು ಹಿಂದಿನ ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಸರಕಾರವಲ್ಲ. ಈ ಕಾರಣ ದಿಂದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಸರಕಾರ ವಿರುದ್ಧ ಮಾಡಿರುವ ಪ್ರತಿಭಟನೆಯು ಜನರಿಗೆ ತಪ್ಪು ಮಾಹಿತಿ ನೀಡುವುದಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಪಕ್ಷದ ಧುರೀಣರಾದ ಪದ್ಮರಾಜ್ ಆರ್ ಪೂಜಾರಿ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಟಿ.ಕೆ.ಸುಧೀರ್,ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಜಯಶೀಲ ಅಡ್ಯಂತಾಯ, ಪ್ರೇಮ್ನಾಥ್, ಉದಯ್ ಆಚಾರ್ಯ, ನೆಲ್ಸನ್ ಮೊಂತೆರೊ, ಯೋಗೇಶ್ ಕುಮಾರ್, ರೀತೇಶ್ ಉಪಸ್ಥಿತರಿದ್ದರು.