ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ| ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ: ಬಿ.ಎಂ ಭಟ್
ಮಂಗಳೂರು, ಆ.5: ಬೀದಿ ವ್ಯಾಪಾರಿಗಳು ಅತ್ಯಂತ ಶ್ರಮ ಜೀವಿಗಳು ಅವರ ಬೇಡಿಕೆಗಳು ನ್ಯಾಯತವಾಗಿದ್ದು, ಹಕ್ಕುಪ್ರಾಪ್ತಿಗೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ, ವಕೀಲರಾದ ಬಿ.ಎಂ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ, ಪ್ರಭುತ್ವದ ದಾಳಿ, ದಬ್ಬಾಳಿಕೆ ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಮಂಗಳವಾರ ನಡೆದ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಐದು ಕೋಟಿಗೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಬೀದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ ಸಂಘಟನೆ ಮತ್ತು ಹೋರಾಟದಿಂದ ಬಲಿಷ್ಠ ಚಳುವಳಿ ಕಟ್ಟಬೇಕೆಂದು ಅವರು ಸಲಹೆ ನೀಡಿದರು.
ಸುಮಾರು 250ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ದೇಶದಲ್ಲಿ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ ಜಾರಿಗೆ ಬಂದು ದಶಕಗಳು ಕಳೆದರೂ ಕೂಡ ಸರಕಾರಗಳು ಕಾನೂನಿನ ಸಮಗ್ರ ಅನುಷ್ಠಾನ ಮಾಡಲು ವಿಫಲವಾಗಿದೆ ಪಿಎಂ ಸ್ವನಿಧಿ ಸಾಲ ಯೋಜನೆ ಯನ್ನು ಸ್ಥಗಿತಗೊಳಿಸಿದ್ದು ಇದರಿಂದ ಬೀದಿ ವ್ಯಾಪಾರಿಗಳ ಸ್ವಾವಲಂಬನೆಯ ಬದುಕಿಗೆ ಧಕ್ಕೆ ಆಗಿದೆ ಎಂದು ಅವರು ಟೀಕಿಸಿದರು.
ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ವ್ಯಾಪಾರಿಗಳ ಸಮಗ್ರ ಕಾನೂನು ಜಾರಿಗೊಳಿಸಲು ಪ್ರಾಮಾಣಿಕ ಹೋರಾಟದ ಅಗತ್ಯ ಎಂದರು.
ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್ ಅಧ್ಯಕ್ಷತೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಮುಖರಾದ ಹಸನ್ ಕುದ್ರೋಳಿ,ಹಂಝ, ವಿನಾಯಕ ಶೆಣೈ ತಲಪಾಡಿ, ಕಲಂದರ್ ಕೋಟೆಕಾರ್,ಸಿಖಂದರ್ ಬೇಗ್, ಚೆರಿಯೋನು ಸುರತ್ಕಲ್, ಮನ್ಸೂರ್ ಸೆಂಟ್ರಲ್ ಮಾರ್ಕೆಟ್, ಶಿವಾನಂದ,ಗಂಗಮ್ಮ,ಮುಸ್ತಫಾ ಸೆಲ್ವರಾಜ್, ಚಂದ್ರಹಾಸ್ ಪಡೀಲ್ ಉಮೇಶ್, ಗದಿಗಪ್ಪ,ಸಿಕಂದರ್ ಬೇಗ್,ವಿಜಯ ಜೈನ್,ಖ್ವಾಜಾ ಮೊಹಿಯುದ್ದಿನ್,ಎಂ ಎನ್ ಶಿವಪ್ಪ,ಚಂದ್ರಶೇಖರ ಭಟ್,ಮೇಬಲ್ ಡಿ ಸೋಜ, ಶಾಲಿನಿ ಬೋಂದೆಲ್, ಅಬ್ದುಲ್ ಖಾದರ್ ಫಿಲೋಮಿನ,ಗುಡ್ಡಪ್ಪ, ರಫೀಕ್, ಸಲಾಂ ಸುರತ್ಕಲ್, ಎಂ.ಎಸ್ ಮೊಯ್ದೀನ್ ಬೈಕಂಪಾಡಿ,ಮುತ್ತುರಾಜ್, ಖಾದರ್ ವಾಮಂಜೂರ್,ರಿಯಾಜ್ ಮದಕ, ರಫೀಕ್ ಪಾಂಡೇಶ್ವರ, ನೌಷಾದ್ ಕಣ್ಣೂರು, ಅಸ್ಲಮ್ ಕಾಟಿಪಳ್ಳ, ಧನಂಜಯ ಸುರತ್ಕಲ್, ಖಲೀಲ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಾವೇಶದ ನಿರ್ಣಯಗಳು :
*ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ ಐಡಿ ಕಾರ್ಡ್, ಪ್ರಮಾಣ ಪತ್ರ ವಿತರಿಸಬೇಕು.
* ನಿವೇಶನ ರಹಿತ ಬೀದಿ ವ್ಯಾಪಾರಿಗಳಿಗೆ ಮನೆ ನಿವೇಶನ ಒದಗಿಸಬೇಕು.
* ಬೀದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಆರೋಗ್ಯಕ್ಕಾಗಿ ಉಚಿತ ವೈದ್ಯಕೀಯ ಸವಲತ್ತು ಪಡೆಯಲು ಆರೋಗ್ಯ ಕಾರ್ಡ್ ವಿತರಿಸಬೇಕು.
* ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯನ್ನು ಮುಂದುವರಿಸಬೇಕು ಮತ್ತು ಸಾಲದ ಮಿತಿಯನ್ನು ಒಂದು ಲಕ್ಷದಿಂದ ಹತ್ತು ಲಕ್ಷಕ್ಕೆ ಏರಿಸಬೇಕು.
* ಎಲ್ಲ ಬೀದಿ ವ್ಯಾಪಾರಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು.
* ಬೀದಿಬದಿ ವ್ಯಾಪಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಬೇಕು
* ನಗರ ಪಾಲಿಕೆ ಮತ್ತು ಪೊಲೀಸರ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ನಿವಾರಣಾ ಸಮಿತಿ ರಚಿಸಬೇಕು.
* ವ್ಯಾಪಾರ ವಲಯವನ್ನು ವ್ಯಾಪಾರಿ ಮತ್ತು ಗ್ರಾಹಕ ಸ್ನೇಹಿಯಾಗಿ ವೈಜ್ಞಾನಿಕ ಮತ್ತು ಸುರಕ್ಷತೆಗೆ ಒತ್ತು ಕೊಟ್ಟು ನಿರ್ಮಿಸಬೇಕು.
* ಮಂಗಳೂರು ನಗರದ ಹತ್ತು ಕಡೆಗಳಲ್ಲಿ ಆಹಾರ ಮಾರಾಟ ವಲಯ ನಿರ್ಮಿಸಬೇಕು.