ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್

ಉಡುಪಿ : ಹಿರಿಯ ಸಮಾಜ ಸೇವಕ ಹಾಗೂ ಉದ್ಯಮಿ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್(89) ನಿಧನರಾದರು.

ತೋನ್ಸೆ ಬೆಂಗ್ರೆಯಲ್ಲಿ 1937ರ ನ.6ರಂದು ಜನಿಸಿದ ಇವರು, ಕಾರ್ಕಳ ಮುನ್ಸಿಫ್ ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 1971ರಲ್ಲಿ ಕತಾರ್‌ನ ದೋಹಾಗೆ ತೆರಳಿ ವಾಣಿಜ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು 30 ವರ್ಷಗಳ ಕಾಲ ಮಾರ್ಸ್ ಟ್ರೇಡಿಂಗ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.

2001ರಲ್ಲಿ ಉಡುಪಿಗೆ ಮರಳಿ ನೆಲೆಸಿದ ಅವರು, ಉಡುಪಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ, ಉಡುಪಿ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉಡುಪಿಯಲ್ಲಿ ಹಲವು ಏಜೆನ್ಸಿ ಹಾಗೂ ವಿತರಣಾ ವ್ಯವಹಾರಗಳನ್ನು ಹೊಂದಿದ್ದ ಅವರು, ಮಾರ್ಸ್ ಟ್ರೇಡರ್ಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಬಾಷಾ ಸಾಹೇಬ್ ಅವರು ಕೆಎಂಸಿಎ ಕತಾರ್‌ನ ಮಾಜಿ ಅಧ್ಯಕ್ಷ ಹಾಗೂ ತುಳು ಕೂಟ ಕತಾರ್‌ನ ಮಾಜಿ ಉಪಾಧ್ಯಕ್ಷರಾಗಿಯೂ ಇದ್ದರು. ಅವರು ಕತಾರ್‌ನಲ್ಲಿರುವ ಹಲವು ಭಾರತೀಯ ಸಂಘಟನೆಗಳು ಮತ್ತು ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.

ಸೆ.9ರಂದು ಮಗ್ರಿಬ್ ನಮಾಝ್ ಬಳಿಕ ಉಡುಪಿ ಜಾಮೀಯ ಮಸೀದಿಯಲ್ಲಿ ಪ್ರಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ತೋನ್ಸೆ ಖದೀಮಿ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಹಿರಿಯ ಪುತ್ರ ಟಿ.ಎಸ್.ಝಫರುಲ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor