Dharwad | ಸರಕಾರಿ ದಾಖಲೆಗಳಲ್ಲಿ ಎಡವಟ್ಟು; ಜೀವಂತ ವ್ಯಕ್ತಿ 5 ವರ್ಷಗಳಿಂದ ‘ಮೃತ’ ಎಂದು ನಮೂದು!
ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಘಟನೆ ಬೆಳಕಿಗೆ
ಸಾಂದರ್ಭಿಕ ಚಿತ್ರ | PC : Gemini AI
ಕಲಘಟಗಿ : ಜೀವಂತ ವ್ಯಕ್ತಿಯೊಬ್ಬರನ್ನು ಸರಕಾರಿ ದಾಖಲೆಗಳಲ್ಲಿ ಮೃತ ಎಂದು ನಮೂದಿಸಿ 5 ವರ್ಷಗಳಿಂದಲೂ ತಪ್ಪನ್ನು ಸರಿಪಡಿಸದಿರುವ ಪ್ರಕರಣ ಶನಿವಾರ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಅಶೋಕ ಗವಡೆನ್ನವರ ಅವರು ಜೀವಂತವಾಗಿದ್ದರೂ ಸರಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆಂದು ನಮೂದಾಗಿರುವುದರಿಂದ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳ ವ್ಯಾಸಂಗ ಸೇರಿದಂತೆ ಕುಟುಂಬದ ವಿವಿಧ ಅಗತ್ಯ ಕೆಲಸಗಳಿಗೆ ದಾಖಲೆಗಳನ್ನು ಪಡೆಯಲು ಮುಂದಾದಾಗ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ʼತಂದೆಯ ಮರಣ ದಾಖಲೆಯನ್ನು ಪಡೆಯಲು ಆಧಾರ್ ಕಾರ್ಡ್ ನೀಡಿ ತೆರಳಿದಾಗ ತನ್ನನ್ನೇ ಸರಕಾರಿ ದಾಖಲೆಗಳಲ್ಲಿ ಮೃತ ವ್ಯಕ್ತಿ ಎಂದು ತೋರಿಸಲಾಗಿದೆ. ದಾಖಲೆಗಳಲ್ಲಿನ ಈ ದೋಷದಿಂದಾಗಿ ಕುಟುಂಬದ ಸದಸ್ಯರಿಗೆ ಅಗತ್ಯ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಪಡೆಯಲು ತೊಂದರೆಯಾಗುತ್ತಿದೆʼ ಎಂದು ಅಶೋಕ ಗವಡೆನ್ನವರ ಅಳಲು ತೋಡಿಕೊಂಡಿದ್ದಾರೆ.
ಜೀವಂತ ವ್ಯಕ್ತಿಯ ಹೆಸರನ್ನು ಮೃತರ ಪಟ್ಟಿಗೆ ಸೇರಿಸಿದ್ದು ಹೇಗೆ? ಈ ತಪ್ಪು ಐದು ವರ್ಷಗಳ ಕಾಲ ಅಧಿಕಾರಿಗಳ ಗಮನಕ್ಕೆ ಬರದಿರುವುದು ಹೇಗೆ? ದಾಖಲೆ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ಇಷ್ಟೊಂದು ಲೋಪವಾಗಲು ಕಾರಣವೇನು ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಆವಾಂತರಕ್ಕೆ ಸಂಬಂಧಿಸಿದಂತೆ ಗ್ರಾಮಲೆಕ್ಕಿಗ ಹುಲಮನಿ ವಿರುದ್ಧ ಕುಟುಂಬದವರು ಆರೋಪ ಮಾಡಿದ್ದಾರೆ. ಆದರೆ, ದಾಖಲೆಗಳಲ್ಲಿ ತಪ್ಪು ಸಂಭವಿಸಿದ ನಿಖರ ಕಾರಣ ಹಾಗೂ ಹೊಣೆ ಯಾರದ್ದು ಎಂಬುದು ಅಧಿಕಾರಿಗಳ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಸಭೆಯಲ್ಲಿ ಅಶೋಕ ಗವಡೆನ್ನವರ ಕುಟುಂಬದ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಜೀವಂತ ವ್ಯಕ್ತಿಯನ್ನೇ ಸರಕಾರಿ ದಾಖಲೆಗಳಲ್ಲಿ ಮೃತ ಎಂದು ನಮೂದಿಸಿರುವುದು ಸಾಮಾನ್ಯ ದಾಖಲೆ ದೋಷವಲ್ಲ. ಇದರಿಂದ ವ್ಯಕ್ತಿಯ ಗುರುತು, ಕುಟುಂಬದ ಹಕ್ಕುಗಳು ಹಾಗೂ ಸರಕಾರಿ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹ
ಅಶೋಕ ಗವಡೆನ್ನವರ ಅವರ ದಾಖಲೆಗಳನ್ನು ತಕ್ಷಣ ಪರಿಶೀಲಿಸಿ, ತಪ್ಪು ಸರಿಪಡಿಸುವ ಜತೆಗೆ ಕುಟುಂಬಕ್ಕೆ ಅಗತ್ಯ ದಾಖಲೆಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂತಹ ಗಂಭೀರ ಲೋಪಕ್ಕೆ ಕಾರಣರಾದವರ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪು ಸಾಬೀತಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.