ಹಾರ್ಮುಝ್ ದಾಳಿ: ಗಾಯಾಳು ಭಾರತೀಯ ನಾವಿಕರನ್ನು ಭೇಟಿ ಮಾಡಿದ ದುಬೈ ಭಾರತೀಯ ಕಾನ್ಸುಲ್
ದುಬೈ: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆದ ಕ್ಷಿಪಣಿ ದಾಳಿಗಳಲ್ಲಿ ಗಾಯಗೊಂಡ ಭಾರತೀಯ ನಾವಿಕರನ್ನು ದುಬೈಯ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಹಾರ್ಮುಝ್ ಜಲಸಂಧಿಯಲ್ಲಿ ಜುಲೈ 14ರ ರಾತ್ರಿ ದಾಳಿಗೆ ಒಳಗಾದ ವಾಣಿಜ್ಯ ಹಡಗುಗಳಾದ ಎಂಟಿ ಅಲ್ ಬಹಿಯಾಹ್ (MT Al Bahiyah) ಮತ್ತು ಎಂಟಿ ಮೊಂಬಾಸಾ (MT Mombasa) ನಿಂದ ಸುರಕ್ಷಿತವಾಗಿ ರಕ್ಷಿಸಲಾದ ಭಾರತೀಯ ನಾವಿಕರನ್ನು ದುಬೈಯ ಭಾರತೀಯ ಕಾನ್ಸುಲ್ ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು.
ದಾಳಿಯಲ್ಲಿ ಗಾಯಗೊಂಡು ದಿಬ್ಬಾ, ಖೋರ್ಫಕ್ಕಾನ್ ಹಾಗೂ ಫುಜೈರಾ ನಗರದ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ನಾವಿಕರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ, ಗಾಯಾಳು ನಾವಿಕರು ಹಾಗೂ ಅವರ ಕುಟುಂಬಗಳಿಗೆ ಭಾರತೀಯ ಕಾನ್ಸುಲೇಟ್ನಿಂದ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮತ್ತು ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ದುಬೈಯ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಆಸ್ಪತ್ರೆ, ಹಡಗು ನಿರ್ವಹಣಾ ಸಂಸ್ಥೆ, ಯುಎಇಯ ಸ್ಥಳೀಯ ಅಧಿಕಾರಿಗಳು ಹಾಗೂ ಗಾಯಾಳು ನಾವಿಕರ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಂಡಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.