ಮುಂಗಾರು ಋತುವಿನಲ್ಲಿ ಕರುಳಿನ ಆರೋಗ್ಯ ರಕ್ಷಣೆ ಹೇಗೆ? ವೈದ್ಯರು ಹೇಳುವುದೇನು?
ಸಾಂದರ್ಭಿಕ ಚಿತ್ರ | Photo Credit : magnific.com
ಮಳೆಗಾಲದಲ್ಲಿ ಹಾನಿಕರವಲ್ಲ ಮತ್ತು ಕ್ಷುಲ್ಲಕವೆಂದು ತೋರುವ ಕೆಲವು ಆಹಾರ ಮತ್ತು ನೀರಿನ ಅಭ್ಯಾಸಗಳು ವಾಸ್ತವದಲ್ಲಿ ಋತುಮಾನದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.
ಮಳೆಗಾಲದಲ್ಲಿ ವಾಂತಿ, ಅತಿಸಾರ ಮತ್ತು ಜ್ವರದಂತಹ ರೋಗಲಕ್ಷಣಗಳೊಂದಿಗೆ ಜೀರ್ಣ ಸಮಸ್ಯೆಗಳೂ ಹೆಚ್ಚಾಗಿ ಕಂಡುಬರುತ್ತವೆ. ಈ ಆರೋಗ್ಯ ಕಾಳಜಿಗಳು ಕಾಕತಾಳೀಯವಲ್ಲ. ಮಾಹಿಮ್ನ ಪಿ.ಡಿ. ಹಿಂದೂಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರ ಡಾ. ಪವನ್ ಧೋಬ್ಲೆ ಅವರ ಪ್ರಕಾರ, ಮಾನ್ಸೂನ್ನಲ್ಲಿ ಮಾಡುವ ಕೆಲವು ತಪ್ಪುಗಳು ಜನರನ್ನು ಋತುಮಾನದ ಕಾಯಿಲೆಗಳಿಗೆ ಗುರಿಯಾಗಿಸಬಹುದು. ಆರ್ದ್ರತೆ ಹೆಚ್ಚಾದಾಗ ಆಹಾರ ಮತ್ತು ನೀರಿನ ಮಾಲಿನ್ಯದ ಅಪಾಯವೂ ಹೆಚ್ಚಾಗಿರುತ್ತದೆ.
ಹಾಗಿದ್ದರೆ, ಮಳೆಗಾಲದಲ್ಲಿ ಜನರು ಮಾಡುವ ಸಾಮಾನ್ಯ ತಪ್ಪುಗಳು ಯಾವುವು? ಮಳೆಗಾಲದಲ್ಲಿ ಹಾನಿಕರವಲ್ಲ ಮತ್ತು ಕ್ಷುಲ್ಲಕವೆಂದು ತೋರುವ ಕೆಲವು ಆಹಾರ ಮತ್ತು ನೀರಿನ ಅಭ್ಯಾಸಗಳು ವಾಸ್ತವದಲ್ಲಿ ಋತುಮಾನದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ರಸ್ತೆಬದಿಯ ಮತ್ತು ನೈರ್ಮಲ್ಯವಿಲ್ಲದ ಆಹಾರ ತಿನ್ನುವುದು, ಸಂಸ್ಕರಿಸದ ಅಥವಾ ಶುದ್ಧೀಕರಿಸದ ನೀರು ಕುಡಿಯುವುದು ಹಾಗೂ ತೊಳೆಯದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಸಾಮಾನ್ಯ ತಪ್ಪುಗಳಾಗಿವೆ ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಹೆಚ್ಚಿನ ಆರ್ದ್ರತೆಯು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಇದರಿಂದ ಜನರು ಜಠರದುರಿತ, ಟೈಫಾಯ್ಡ್, ಕಾಲರಾ, ಆಹಾರ ವಿಷಬಾಧೆ ಹಾಗೂ ಹೆಪಟೈಟಿಸ್ ಎ ಮತ್ತು ಇ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ಹೀಗಾಗಿ ಅತಿಸಾರ, ವಾಂತಿ, ಹೊಟ್ಟೆ ನೋವು, ಜ್ವರ ಮತ್ತು ವಾಕರಿಕೆಯಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
►ಮಳೆಗಾಲದಲ್ಲಿ ಆರೋಗ್ಯಕರವಾಗಿರಲು ವೈದ್ಯರ ಸಲಹೆಗಳು:
* ಸುರಕ್ಷಿತ ನೀರನ್ನು ಕುಡಿಯಿರಿ: ಜಲಜನ್ಯ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕುದಿಸಿದ ಅಥವಾ ಶುದ್ಧೀಕರಿಸಿದ ನೀರನ್ನು ಮಾತ್ರ ಸೇವಿಸಿ.
* ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ: ಸಾಧ್ಯವಾದಷ್ಟು ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನೇ ಸೇವಿಸಿ.
* ಉಳಿದ ಆಹಾರವನ್ನು ಸರಿಯಾಗಿ ಸಂಗ್ರಹಿಸಿ: ಆಹಾರವನ್ನು ಎರಡು ಗಂಟೆಗಳ ಒಳಗೆ ಗಾಳಿಯಾಡದ ಪಾತ್ರೆಗಳಲ್ಲಿ ಹಾಕಿ ಫ್ರಿಜ್ನಲ್ಲಿ ಇರಿಸಿ.
* ಕೈಗಳನ್ನು ಶುಚಿಗೊಳಿಸಿ: ಅಡುಗೆ ಮಾಡುವ ಮೊದಲು ಮತ್ತು ಊಟ ಮಾಡುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ.
* ನೈರ್ಮಲ್ಯವಿಲ್ಲದ ಆಹಾರ ತಪ್ಪಿಸಿ: ರಸ್ತೆಬದಿಯ ಆಹಾರ ಅಥವಾ ನೈರ್ಮಲ್ಯವಿಲ್ಲದ ಪರಿಸ್ಥಿತಿಯಲ್ಲಿ ತಯಾರಿಸಿದ ಹಾಗೂ ಸಂಗ್ರಹಿಸಿದ ಆಹಾರದಿಂದ ದೂರವಿರಿ.
* ಹಸಿ ಆಹಾರ ಸೇವಿಸಬೇಡಿ: ಹಸಿ ತರಕಾರಿಗಳು, ಸಲಾಡ್ ಗಳು ಮತ್ತು ಸಮುದ್ರಾಹಾರವನ್ನು ಬೇಯಿಸದೆ ಸೇವಿಸಬೇಡಿ. ಅವು ಕಲುಷಿತವಾಗಿರಬಹುದು.
* ಪ್ರೊಬಯಾಟಿಕ್ ಸಮೃದ್ಧ ಆಹಾರ ಸೇವಿಸಿ: ಮೊಸರು, ಯೋಗರ್ಟ್ ಮತ್ತು ಮಜ್ಜಿಗೆಯಂತಹ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸಿ.
* ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ: ನಿಮ್ಮ ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಸಿಟ್ರಸ್ ಹಣ್ಣುಗಳು ಮತ್ತು ಅರಿಶಿಣದಂತಹ ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವ ಆಹಾರಗಳನ್ನು ಸೇರಿಸಿ.
►ವೈದ್ಯರ ಸಲಹೆ ಯಾವಾಗ ಪಡೆಯಬೇಕು?
ನಿರಂತರವಾಗಿ ಅತಿಸಾರ, ವಾಂತಿ, ತೀವ್ರ ಹೊಟ್ಟೆ ನೋವು ಅಥವಾ ಅಧಿಕ ಜ್ವರ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಬೇಕು. ಡಿಹೈಡ್ರೇಶನ್ ಅಥವಾ ತೀವ್ರ ಸೋಂಕಿನಂತಹ ಸಮಸ್ಯೆಗಳನ್ನು ತಪ್ಪಿಸಲು ಸಕಾಲದಲ್ಲಿ ವೈದ್ಯಕೀಯ ಆರೈಕೆ ಪಡೆಯುವುದು ಅಗತ್ಯ. ಜೀರ್ಣ ಸಮಸ್ಯೆಗಳು ಸೌಮ್ಯವಾಗಿರಬಹುದು ಮತ್ತು ವಿಶ್ರಾಂತಿ ಹಾಗೂ ಸಾಕಷ್ಟು ನೀರು ಕುಡಿಯುವುದರಿಂದ ಕಡಿಮೆಯಾಗಬಹುದು. ಆದರೆ ಸಮಸ್ಯೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಸೂಚನೆ: ಈ ಲೇಖನವನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯ ಆಧಾರದ ಮೇಲೆ ಮಾಹಿತಿ ಉದ್ದೇಶಕ್ಕಾಗಿ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನಿಮ್ಮ ವಿಶ್ವಾಸಾರ್ಹ ವೈದ್ಯರ ಸಲಹೆ ಪಡೆಯಿರಿ.