ಪಾಕಿಸ್ತಾನ ಮತ್ತು ಭಾರತ ಮಾತುಕತೆ ಮೂಲಕ ಬಾಕಿಯಿರುವ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು: ಪಾಕ್ ಪ್ರಧಾನಿ
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ (Photo credit: AP)
ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಭಾರತ ಶಾಂತಿಯುತ ನೆರೆಹೊರೆಯವರಂತೆ ಕುಳಿತು ಕಾಶ್ಮೀರ ಸೇರಿದಂತೆ ತಮ್ಮ ನಡುವೆ ಬಾಕಿ ಇರುವ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರು ಶುಕ್ರವಾರ ಹೇಳಿದರು.
ಇಲ್ಲಿನ ಪಾಕಿಸ್ತಾನ ಸ್ಮಾರಕದಲ್ಲಿ ಸೇನೆಯ ಗೌರವಾರ್ಥ ಆಯೋಜಿಸಲಾಗಿದ್ದ ‘ಯೂಮ್-ಎ-ತಶಕೂರ್(ಕೃತಜ್ಞತಾ ದಿನ)’ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಶರೀಫ್, ‘ಭಾರತ ಮತ್ತು ಪಾಕಿಸ್ತಾನ ಮೂರು ಯುದ್ಧಗಳನ್ನು ಮಾಡಿವೆ, ಆದರೆ ಅದರಿಂದ ಏನೂ ಪಡೆಯಲಿಲ್ಲ. ಶಾಂತಿಯುತ ನೆರೆಹೊರೆಯವರಂತೆ ಕುಳಿತು ಜಮ್ಮುಕಾಶ್ಮೀರ ಸೇರಿದಂತೆ ಬಾಕಿಯಿರುವ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಇದು ನಮಗೆ ಪಾಠವಾಗಿದೆ. ನಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಜಗತ್ತಿನ ಈ ಭಾಗದಲ್ಲಿ ನಾವು ಶಾಂತಿಯನ್ನು ಹೊಂದಿರುವುದು ಸಾಧ್ಯವಿಲ್ಲ’ ಎಂದರು.
ಪಾಕ್ ಆಕ್ರಮಿತ ಕಾಶ್ಮೀರದ ಮರಳಿಸುವಿಕೆ ಮತ್ತು ಭಯೋತ್ಪಾದನೆ ವಿಷಯದ ಬಗ್ಗೆ ಮಾತ್ರ ತಾನು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತವು ಸ್ಪಷ್ಟಪಡಿಸಿದೆ.
‘ಶಾಂತಿ ಮರುಸ್ಥಾಪನೆಯಾದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿಯೂ ನಾವು ಸಹಕರಿಸಬಹುದು’ ಎಂದು ಹಿರಿಯ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶರೀಫ್ ಹೇಳಿದರು.